ಬೆಂಗಳೂರು: ಪ್ರವಾಹದ ನೀರಿನಲ್ಲಿಯೂ ಬೆಳೆಯುವ ಹೊಸ ಟೊಮೇಟೊ ತಳಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಕಂಡು ಹಿಡಿದಿದೆ. ಸತತ 6 ದಿನ ನೀರಿದ್ದರೂ ಕೊಳೆಯದೆ ಉತ್ತಮ ಇಳುವರಿಯನ್ನ ಕೊಡುವುದು ಇದೇ ಅರ್ಕಾ ಅಭೇದ್ ತಳಿ.
ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆಯಲ್ಲಿ ( IIHR) ಅವರಣದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳ-2021 ನಡೆಯುತ್ತಿದ್ದು, ಈ ಬಾರಿಯ ಮೇಳದಲ್ಲಿ 257 ಕೃಷಿ ತಂತ್ರಜ್ಞಾನ ಮತ್ತು ತಳಿಗಳ ಅವಿಷ್ಕಾರ ಮಾಡಿದೆ. ವಿಶೇಷವಾಗಿ ಬದನೆಕಾಯಿ ಅರ್ಕಾನೀಲಕಂಠ್ ತಳಿಗೆ ಟೊಮೇಟೊದ ಅರ್ಕಾ ಅಭೇದ್ ತಳಿಯನ್ನ ಕಸಿ ಮಾಡಿರುವ ತಳಿ ಮೇಳದ ಆಕರ್ಷಣೆಯಲ್ಲಿ ಒಂದಾಗಿದೆ.
ಅರ್ಕಾ ಅಭೇದ್ ತಳಿಯ ವಿಶೇಷತೆ ಎಂದರೆ ಟೊಮೇಟೊ ತೋಟಕ್ಕೆ ಪ್ರವಾಹದ ನೀರು ನುಗ್ಗಿದರೂ ಟೊಮೇಟೊ ಗಿಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರವಾಹದ ನೀರಿನಲ್ಲಿ ಸತತ ಆರು ದಿನ ಇದ್ದರೂ ಗಿಡ ಕೊಳೆಯುವುದಿಲ್ಲ ಮತ್ತು ಬಾಡುವುದಿಲ್ಲ. ಇತರ ಟೊಮೇಟೊ ತಳಿಗಳು ಕೇವಲ 24 ಗಂಟೆಯಲ್ಲಿ ಕೊಳೆಯುತ್ತೆ ಮತ್ತು ಬಾಡಿ ಹೋಗುತ್ತದೆ. ಪ್ರವಾಹ ಮತ್ತು ಜೌಗು ಪ್ರದೇಶದಲ್ಲಿ ಅರ್ಕಾ ಅಭೇದ್ ಉತ್ತಮ ತಳಿಯಾಗಿದೆ.
ಬದನೆ ತಳಿಯಾದ ಅರ್ಕಾ ನೀಲಕಂಠ್ ತಳಿಯ ಬೇರುಗಳು ನೀರಿನಲ್ಲಿ ಅಭದ್ರವಾಗಿ ಬೇರೂರುತ್ತದೆ. ಇದರಿಂದ ಅರ್ಕಾ ಅಭೇದ್ಗೆ ಯಾವುದೇ ತೊಂದರೆಯಾಗುವುದಿಲ್ಲ. ಮಳೆಯಾಗುವ ಮತ್ತು ಪ್ರವಾಹಕ್ಕೆ ತುತ್ತಾಗುವ ಪ್ರದೇಶದಲ್ಲಿ ಅರ್ಕಾ ಅಭೇದ್ ಟೊಮೇಟೊ ತಳಿಯನ್ನು ಬೆಳೆಯ ಬಹುದಾಗಿದೆ.