ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಅಸ್ತಿತ್ವಕ್ಕೆ ಬಂದ 'ಮೌಢ್ಯ ಪ್ರತಿಬಂಧಕ ಕಾಯ್ದೆ'ಯ ಪರಿಣಾಮಕಾರಿ ಜಾರಿಗೆ ಜಾಗೃತಾಧಿಕಾರಿಯಾಗಿ ಎಲ್ಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ಗಳನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎರಡು ವರ್ಷಗಳ ಹಿಂದೆ ಸರ್ಕಾರ ಮೌಢ್ಯ ಪದ್ಧತಿಗಳ ನಿಷೇಧಕ್ಕೆ ಕರ್ನಾಟಕದ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ನಿಷೇಧಕ್ಕೆ ವಿಶೇಷ ಕಾಯ್ದೆಯನ್ನು ಜಾರಿಗೊಳಿಸಿತ್ತು. ಇದೀಗ ಒಳಾಡಳಿತ ಇಲಾಖೆ ನಿಗದಿಪಡಿಸಿದ ವಿಶೇಷ ಪೊಲೀಸ್ ಠಾಣೆಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಠಾಣೆಗಳನ್ನು ಮೌಢ್ಯ ನಿಷೇಧ ನಿರ್ಬಂಧಕ ಠಾಣೆಗಳೆಂದು ಗುರುತಿಸಿದೆ. ಅಲ್ಲದೆ, ಈ ಪೊಲೀಸ್ ಠಾಣೆಗಳಲ್ಲಿನ ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ತಮ್ಮ ವ್ಯಾಪ್ತಿಯಲ್ಲಿ ಜಾಗೃತಾಧಿಕಾರಿಗಳನ್ನಾಗಿ ಮಾಡಿದ್ದು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕಾಯ್ದೆಯ ಬಗ್ಗೆ ಮಾಹಿತಿ:
ಸಮಾಜದಲ್ಲಿನ ಕಂದಾಚಾರಗಳನ್ನು ನಿಷೇಧಿಸಬೇಕೆಂಬ ಒತ್ತಾಯಕ್ಕೆ ಮಣಿದ ಹಿಂದಿನ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ಮೌಢ್ಯ ನಿರ್ಬಂಧ ಕಾಯ್ದೆಗೆ ಮುಂದಾಯಿತು. ವಿಧಾನಸಭೆಯ ಉಭಯ ಸದನಗಳಲ್ಲಿ ಕಾಯ್ದೆಯ ಕುರಿತು ವಿಸ್ತೃತ ಚರ್ಚೆ ನಡೆದು ಕೊನೆಗೆ ಉದ್ದೇಶಿತ ಕಾಯ್ದೆಯಲ್ಲಿ ಕೆಲ ಬದಲಾವಣೆ ತಂದು ಸದನದಲ್ಲಿ ಮಂಡಿಸಿ ಅಂಗೀಕರಿಸಲಾಯಿತು.
ನಂತರ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. ಇದೀಗ ಮೌಢ್ಯ ನಿರ್ಬಂಧಿಸುವ ಹೊಣೆಗಾರಿಕೆಯನ್ನು ಪೊಲೀಸರ ಹೆಗಲಿಗೆ ಹೊರಿಸಿ ಬಿಜೆಪಿ ಸರ್ಕಾರ ಆದೇಶ ಹೊರಡಿಸಿದೆ. ಕಾಯ್ದೆ ಉಲ್ಲಂಘಿಸಿದವರಿಗೆ 1 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ, 5 ರಿಂದ 50 ಸಾವಿರ ರೂ. ವರೆಗೆ ದಂಡ ವಿಧಿಸಲು ನ್ಯಾಯಾಲಯಕ್ಕೆ ಅವಕಾಶವಿದೆ.
ಯಾವುದು ನಿಷೇಧ?
ಬೆತ್ತಲೆ ಸೇವೆ, ಎಂಜಲೆಲೆ ಮೇಲೆ ಉರುಳಾಟ, ಮಾಟ, ಮಾಯ-ಮಂತ್ರ, ಬಾನುಮತಿ, ಋತುಮತಿ- ಗರ್ಭಿಣಿಯರನ್ನು ಪ್ರತ್ಯೇಕವಾಗಿಡುವ ಪದ್ಧತಿ, ಕೈ ಬೆರಳಿನಲ್ಲೇ ಚಿಕಿತ್ಸೆ ಕೊಡುವುದಾಗಿ ನಂಬಿಸುವುದು, ಭ್ರೂಣದ ಲಿಂಗ ಬದಲಾಯಿಸುವುದಾಗಿ ನಂಬಿಸುವುದು, ನಾಯಿ, ಹಾವು, ಚೇಳು ಕಡಿತಕ್ಕೆ ಯಂತ್ರ ಕಟ್ಟಿಸಿಕೊಳ್ಳುವಂತೆ ಸಲಹೆ ನೀಡುವ ಪದ್ದತಿಗಳೆಲ್ಲಾ ನಿಷೇಧ ವ್ಯಾಪ್ತಿಗೆ ಬರಲಿವೆ.