ಬೆಂಗಳೂರು: ಇಂದು ಮೈಸೂರಿನಲ್ಲಿ ಮತ್ತೊಂದು ಕೊರೊನಾ ವೈರಸ್ ಪ್ರಕರಣ ದೃಢಪಟ್ಟಿದ್ದು, ಆ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದುಬೈಯಿಂದ ಬಂದಿದ್ದ ಮೈಸೂರು ಮೂಲದ 46 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಪ್ರತಿ ಜಿಲ್ಲೆಯಲ್ಲಿ ಕೊರೊನಾ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ನಿನ್ನೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಸ್ಕ್ಯಾನರ್ ಕಂಪನಿ ಜೊತೆ ವೆಂಟಿಲೇಟರ್ ಪೂರೈಕೆ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ 30% ವೆಂಟಿಲೇಟರ್ ಇಡಬೇಕು ಎಂದು ಸೂಚನೆ ನೀಡಿದ್ದೇವೆ ಎಂದರು.
ಆದ್ಯತೆ ಮೇರೆಗೆ 1 ಸಾವಿರ ವೆಂಟಿಲೇಟರ್ ಪೂರೈಸುವಂತೆ ಸೂಚನೆ ನೀಡಲಾಗಿದೆ. 10 ಲಕ್ಷ N 95 ಮಾಸ್ಕ್, 5 ಪಿಪಿಇ ಕಿಟ್, ತ್ರಿ ಲೇಯರ್ ಮಾಸ್ಕ್ 15 ಲಕ್ಷ ಖರೀದಿಗೆ ನಿರ್ಧರಿಸಲಾಗಿದೆ. ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನರ್ ಗಳ ಖರೀದಿಗೂ ನಿರ್ಧಾರ ಮಾಡಾಗಿದೆ ಎಂದು ವಿವರಿಸಿದರು.
ನಾಳೆಯಿಂದ ಸಚಿವರು ಜಿಲ್ಲಾ ಪ್ರವಾಸ ಮಾಡುತ್ತೇವೆ. ಎಲ್ಲಾ ಜಿಲ್ಲೆಗೆ ನಾಳೆಯಿಂದ ಪ್ರವಾಸ ಕೈಗೊಳ್ಳುತ್ತೇವೆ. ಇನ್ನು ಲ್ಯಾಬ್ ಟೆಸ್ಟ್ ವಸ್ತುಗಳ ಖರೀದಿಗೂ ನಿರ್ಧಾರ ಆಗಿದೆ ಎಂದರು.
ಜನಸೇರದಂತೆ ಕ್ರಮ ವಹಿಸುತ್ತೇವೆ:
ಸಾರ್ವಜನಿಕ ಸ್ಥಳಗಳಲ್ಲಿ ಜನ ಸೇರದೇ ಇರಲು ಕ್ರಮವಹಿಸಲಾಗುತ್ತದೆ ಎಂದು ಡಿಸಿಎಂ ಅಶ್ವತ್ಥ್ ನಾರಯಣ್ ತಿಳಿಸಿದರು.
ಕೊರೊನಾ ವೈರಸ್ ಗೆ ಅಗತ್ಯ ಕ್ರಮ ಸರ್ಕಾರ ತೆಗೆದುಕೊಂಡಿದೆ. ಈಗ ಮಾಧ್ಯಮಗಳಲ್ಲಿ ಕೆಲ ಮಾಹಿತಿ ಬಂದಿದೆ. ಹೀಗಾಗಿ ಮತ್ತಷ್ಟು ಅಗತ್ಯ ಕ್ರಮ ತಗೋತೀವಿ. 84% ಐಟಿ ಕಂಪನಿಗಳ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಉಳಿದ ಸೇವೆ ಅಗತ್ಯತೆ ಮೇಲೆ ತೆರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.