ಬೆಂಗಳೂರು: ಕೃಷಿ ಉತ್ಪನ್ನಗಳ ಮಾರಾಟ ಹಾಗೂ ದಾಸ್ತಾನು ಸಮಸ್ಯೆ ಪರಿಹಾರಕ್ಕೆ ಅಗ್ರಿ ವಾರ್ ರೂಮ್ ಆರಂಭಿಸಲಾಗಿದ್ದು, ಕೃಷಿ ಚಟುವಟಿಕೆಗೆ ಪೂರಕವಾಗಿ ಹಸಿರು ಪಾಸ್ ವಿತರಣೆಯನ್ನು ಕೃಷಿ ಇಲಾಖೆ ಆರಂಭಿಸಿದೆ.
ಲಾಕ್ಡೌನ್ನಿಂದಾಗಿ ರಾಜ್ಯದಲ್ಲಿ ಅಗತ್ಯ ವಸ್ತುಗಳ ಸರಬರಾಜು, ಸಾಗಣೆ ಮಾರಾಟ ಸಂಬಂಧ ಕೈಗೊಳ್ಳಲಾದ ಕ್ರಮಗಳ ಕುರಿತು ಕೃಷಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಸಹಕಾರ ಇಲಾಖೆಯ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದಲ್ಲಿ ಕೃಷಿ, ತೋಟಗಾರಿಕೆ, ಸಹಕಾರ ಇಲಾಖಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಯಿತು.
ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ಪರಿಕರಗಳನ್ನು ಸಕಾಲದಲ್ಲಿ ರೈತರಿಗೆ ದೊರೆಯುವಂತೆ ಮಾಡಲು ಹಾಗೂ ವಿವಿಧ ಅಗತ್ಯ ವಸ್ತುಗಳ ಸಮರ್ಪಕ ವ್ಯವಸ್ಥೆಗಾಗಿ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸಲು ಕೃಷಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ "ಅಗ್ರಿ ವಾರ್ ರೂಮ್" ತೆರೆದ ಬಗ್ಗೆ, ರೈತರ ಕೃಷಿ ಪರಿಕರಗಳ ಸರಬರಾಜಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಮಳಿಗೆಗಳ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯದ ಎಲ್ಲ ಕೃಷಿ ಪರಿಕರ ಮಾರಾಟಗಾರರಿಗೆ "ಗ್ರೀನ್ ಪಾಸ್" ಗಳನ್ನು ಒದಗಿಸುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಲಾಯಿತು.
ಕೆಲವೊಂದು ಕಡೆ ಹಿಂಗಾರು/ ಬೇಸಿಗೆ ಹಂಗಾಮಿನಲ್ಲಿ ಬೆಳೆದ ಫಸಲುಗಳ ಕೊಯ್ಲಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಸಾಗಣೆಗೆ ತೊಂದರೆಯಾಗುತ್ತಿರುವುದನ್ನು ನಿವಾರಿಸಲು, ಜಿಲ್ಲಾ ಜಂಟಿ ನಿರ್ದೇಶಕರುಗಳಿಗೆ ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಲು ಹಾಗೂ ಅಂತರ್ರಾಜ್ಯ ಸಾಗಣೆ ವ್ಯವಸ್ಥೆಯಲ್ಲಿ ಬರುವ ತೊಂದರೆಗಳನ್ನು ನಿವಾರಿಸಬೇಕೆಂದು ಸಚಿವರು ಸಭೆಯಲ್ಲಿ ಸೂಚಿಸಿದರು.
ಕೇರಳ ಹೊರತುಪಡಿಸಿ ಎಲ್ಲಾ ಅಂತರ್ ರಾಜ್ಯ ಗಡಿಗಳಲ್ಲಿ ಅಗತ್ಯ ವಸ್ತುಗಳ ಸಾಗಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ 122 ಖಾಸಗಿ, 6 ಎಪಿಎಂಸಿ, 8 ಕಾಪೆಕ್ ಒಡೆತನದ ಸೇರಿದಂತೆ ಒಟ್ಟು 136 ಶಿಥಿಲೀಕರಣ ಘಟಕಗಳಿದ್ದು, 4,40,883 ಮೆಟ್ರಿಕ್ ಟನ್ ದಾಸ್ತಾನು ಮಾಡುವ ಸಾಮರ್ಥ್ಯವಿರುತ್ತದೆ. ಕೆಲವೊಂದು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಅಥವಾ ಮಾರಾಟ ಮಾಡಲು ಸಾಧ್ಯವಾಗದಿದ್ದರೆ ಪಕ್ಷದಲ್ಲಿ ಶಿಥಿಲೀಕರಣ ಘಟಕಗಳಲ್ಲಿ ಶೇಖರಣೆ ಮಾಡಲು ಕಾಪೆಕ್ (ಕರ್ನಾಟಕ ಸ್ಟೇಟ್ ಅಗ್ರಿಕಲ್ಚರಲ್ ಪ್ರಡ್ಯೂಸ್, ಪ್ರೊಸೆಸಿಂಗ್ ಎಂಡ್ ಎಕ್ಸಪೋರ್ಟ್ ಕಾರ್ಪೋರೇಷನ್) ಇದರ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.
ಹಾಪ್ ಕಾಮ್ಸ್ ಮುಖಾಂತರ ಎಲ್ಲಾ ಜಿಲ್ಲೆಗಳಿಗೆ ಹೂವು, ತರಕಾರಿ ಹಾಗೂ ಹಣ್ಣುಗಳನ್ನು ಖರೀದಿ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆ ಬಳಿಕ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಸಹಕಾರ ಸಚಿವರು ಮತ್ತು ತಾವು ಹಾಗೂ ಕಾರ್ಯದರ್ಶಿಗಳು ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳ ಅಧಿಕಾರಿಗಳ ಜೊತೆ ಸೇರಿ ರೈತರ ಬೆಳೆಗಳು, ಪರಿಕರಗಳ ಮಾರಾಟ ಕುರಿತು ಸಭೆ ನಡೆಸಿ ಚರ್ಚಿಸಿದ್ದೇವೆ. ಬೆಂಗಳೂರಿನಲ್ಲಿ ತರಕಾರಿ ಹಾಗೂ ದಿನಸಿ ಮಾರಾಟ ಮಾಡಲು ಯಾವುದೇ ತೊಂದರೆಯಿಲ್ಲ. ಬೆಂಗಳೂರಿನ ಸುತ್ತಮುತ್ತಲಿನ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ ಈ ಜಿಲ್ಲೆಗಳಲ್ಲಿ ಹೆಚ್ಚಾಗಿ ಹಣ್ಣುಹಂಪಲುಗಳನ್ನು ಬೆಳೆದ ರೈತರು ಎಪಿಎಂಪಿ ಸಭಾಂಗಣದಲ್ಲಿ ತಮ್ಮ ಬೆಳೆಗಳನ್ನು ತಂದು ತಾಲೂಕು ಕೃಷಿ ಉಪನಿರ್ದೇಶಕರ ಸಹಯೋಗದೊಂದಿಗೆ ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಿ ಅಲ್ಲಿಂದ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ಚರ್ಚಿಸಲಾಗಿದೆ.
ಕೃಷಿಕರಿಗೆ ಅನುಕೂಲ ಕಲ್ಪಿಸಲು ಕೃಷಿ ಆಯುಕ್ತರ ಕಚೇರಿಯಲ್ಲಿ ಅಗ್ರಿವಾರ್ ರೂಮ್ ತೆರೆಯಲಾಗಿದ್ದು ಇದು ದಿನದ 12ತಾಸು ಕೆಲಸ ನಿರ್ವಹಿಸಲಿದೆ. ಒಂದುವೇಳೆ ರೈತರು ಬೆಳೆದ ಬೆಳೆಗಳ ದಾಸ್ತಾನು, ಮಾರಾಟ ಸರಬರಾಜಿಗೆ ತೊಂದರೆಯುಂಟಾದಲ್ಲಿ 080-22212818 ಹಾಗೂ 080-22210237 ಈ ಸಹಾಯವಾಣಿ ಸಂಖ್ಯೆಗೆ ಕರೆಮಾಡಬಹುದಾಗಿದೆ. ಈ ಸಾಹಯವಾಣಿ ಕೇವಲ ಕೃಷಿ ಇಲಾಖೆಯಷ್ಟೇ ಅಲ್ಲ ತೋಟಗಾರಿಕೆ, ಸಹಕಾರ ಇಲಾಖೆಯ ದೂರುಗಳಿಗೂ ಸಹಾಯವಾಣಿಯಾಗಿದೆ ಎಂದು ಮಾಹಿತಿ ನೀಡಿದರು.