ಬೆಂಗಳೂರು: ನಗರದಲ್ಲಿ ಮತ್ತೆ ಜಾಹೀರಾತು, ಹೋರ್ಡಿಂಗ್ಗಳಿಗೆ ಅವಕಾಶ ನೀಡುವ ಕಾನೂನು ಬೇಡವೇ ಬೇಡ ಎಂದು ಬಿಬಿಎಂಪಿ ಮೇಯರ್ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರೆ, ಇತ್ತ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್, ಕಾನೂನುಗಳಲ್ಲಿ ಬದಲಾವಣೆ ತರಲಾಗುತ್ತಿದೆ ಎಂಬ ಸುಳಿವು ಕೊಟ್ಟಿದ್ದಾರೆ. ಹೀಗಾಗಿ ಮೇಯರ್ ಎಂ. ಗೌತಮ್ ಕುಮಾರ್ ಹಾಗೂ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗ್ತಿದೆ.
ಬಿಬಿಎಂ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಮಾತನಾಡಿ, ಬಿಬಿಎಂಪಿ ಹಳೆಯ ನಿಯಮಕ್ಕೆ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈಗ ಸೈನೇಜ್ ಮತ್ತು ನಾಮಫಲಕಕ್ಕೆ ಸಂಬಂಧಿಸಿದಂತೆ ಮಾತ್ರ ಜಾಹೀರಾತು ನಿಯಮ ರೂಪಿಸಲಾಗಿದೆ. ಜಾಹೀರಾತಿಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮ ರೂಪಿಸುವ ಅವಶ್ಯಕತೆ ಇದೆ. ಈಗಿರುವ ನಿಯಮಕ್ಕೆ ನಗರಾಭಿವೃದ್ಧಿ ಇಲಾಖೆ ತಿದ್ದುಪಡಿ ತಂದಿದ್ದು, ಸಾರ್ವಜನಿಕ ಆಕ್ಷೇಪಣೆಗೂ ಬಿಟ್ಟಿದೆ ಎಂದರು.
ನಗರದಲ್ಲಿ ಜಾಹೀರಾತು ಅಳವಡಿಕೆ ವಿಚಾರವಾಗಿ ನಗರಾಭಿವೃದ್ಧಿ ಇಲಾಖೆ ಸದ್ಯದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಎಲ್ಲಾ ವಲಯಗಳಲ್ಲೂ ಒಂದೇ ರೀತಿಯ ನಿಯಮ ಮಾಡಲು ಸಾಧ್ಯವಿಲ್ಲ. ನಗರದ ಎ ಝೋನ್, ಹಾಗೂ ಕೋರ್ ಏರಿಯಾಗಳನ್ನು ಬಿಟ್ಟು ಹೊರವಲಯಗಳಲ್ಲಿ ಹೋರ್ಡಿಂಗ್ಗಳಿಗೆ ಅವಕಾಶ ನೀಡುವ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ ಎಂದರು.
ಕನ್ನಡ ನಾಮಫಲಕ ಹಾಕದ ಮಳಿಗೆಗಳ ಪರವಾನಗಿ ರದ್ದು ಮಾಡಲು ತಕ್ಷಣವೇ ಸಾಧ್ಯವಿಲ್ಲ. ವಾಣಿಜ್ಯ ಪರವಾನಗಿ ನೀಡುವ ನಿಯಮಗಳಲ್ಲಿ ಕನ್ನಡ ನಾಮಫಲಕದ ನಿಯಮವನ್ನೂ ಸೇರಿಸಿಕೊಳ್ಳಬೇಕಾಗಿದ್ದು, ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.