ಬೆಂಗಳೂರು: ಪೊಲೀಸ್ ವಶದಲ್ಲಿದ್ದಾಗಲೇ ಆರೋಪಿ ಸಾವು ಪ್ರಕರಣ ಸಂಬಂಧ ಇಲಾಖಾ ತನಿಖೆ ನಡೆಸಿ ವರದಿ ನೀಡುವಂತೆ ವೈಟ್ ಫೀಲ್ಡ್ ಉಪವಿಭಾಗದ ಡಿಸಿಪಿ ದೇವರಾಜ್ ಗೆ ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ಆದೇಶಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಸಂಗೀತಾ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಮನೆಯವರು ಸಂಗೀತಾ ಪತಿಯಾಗಿರುವ ಶಕ್ತಿವೇಲು ವಿರುದ್ಧ ಕೊಲೆ ಆರೋಪ ಮಾಡಿ ದೂರು ನೀಡಿದ್ದರು. ಈ ಸಂಬಂಧ ಕೆ.ಆರ್.ಪುರಂ ಪೊಲೀಸರು ಆತನನ್ನು ಬಂಧಿಸಿದ್ದರು.
ಇದಾದ ನಂತರ ಶೌಚಾಲಯಕ್ಕೆ ಹೋಗಬೇಕೆಂದು ಪೊಲೀಸರಿಗೆ ಹೇಳಿ ಅವರಿಂದ ಕಣ್ತಪ್ಪಿಸಿ ಓಡಿಹೋಗಿದ್ದ. ಈತ ಓಡಿ ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಳಿಕ ಐಟಿಐ ಬಳಿಯ ಸ್ಕೇವಾಕ್ ನಿಂದ ಬಿದ್ದು ಸಾವಿಗೀಡಾಗಿದ್ದ. ಘಟನೆ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸ್ ಕಸ್ಪಡಿಯಲ್ಲಿದ್ದಾಗಲೇ ಶಕ್ತಿವೇಲು ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆ ಇಲಾಖಾ ತನಿಖಾ ನಡೆಸಿ ವರದಿ ನೀಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಡಿಸಿಪಿ ದೇವರಾಜ್ ಗೆ ತಾಕೀತು ಮಾಡಿದ್ದಾರೆ.