ಬೆಂಗಳೂರು : ಮೇಕೆದಾಟು ಯೋಜನೆ ವಿಳಂಬಕ್ಕೆ ದಾಖಲೆ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ನವರು ಪಾದಯಾತ್ರೆ ಮಾಡೋಕು ಮೊದಲೇ ರಾಜ್ಯದ ಜನರಿಗೆ ಸತ್ಯದರ್ಶನ ಮಾಡಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಯೋಜನೆ ವಿಳಂಬದ ಬಗ್ಗೆ ದಾಖಲೆ ಬಿಡುಗಡೆ ಮೂಲಕ ಸತ್ಯ ದರ್ಶನ ಮಾಡಿಸುತ್ತೇವೆ ಎಂದಿದ್ದಾರೆ.
ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡಿಯೇ ಸಿದ್ದ ಎಂಬ ರಾಜ್ಯ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ಭ್ರಮೆಯಲ್ಲಿದ್ದಾರೆ. ಪಂಜಾಬ್ನಲ್ಲಿ ಅವರದ್ದೇ ಸರ್ಕಾರ ಇದೆ. ಅಲ್ಲಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿದ್ದಾರೆ. ಕೇವಲ ಪಾದಯಾತ್ರೆ ಮೂಲಕ ಕಾಂಗ್ರೆಸ್ನವರು ರಾಜಕೀಯ ಮಾಡ್ತಿದ್ದಾರೆ ಎಂದು ಟೀಕಿಸಿದರು.
ಅಧಿಕಾರ ಇದ್ದಾಗ ಏನೂ ಮಾಡದ ಕಾಂಗ್ರೆಸ್, ಈಗ ಅಧಿಕಾರಕ್ಕಾಗಿ ಪಾದಯಾತ್ರೆ ಮಾಡ್ತಿದೆ. ಅವರ ಕಾಲದಲ್ಲಿ ಏನು ಮಾಡಿದ್ದರು ಎಂದು ಮಾಧ್ಯಮಗಳ ಮುಂದೆ ಇಡಲಿ. ಕೃಷ್ಣೆ ಕಡೆ ಪಾದಯಾತ್ರೆ ಮಾಡಿದ್ರು, ಏನಾಯ್ತು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: 2 ವಾರ ಟಫ್ ರೂಲ್ಸ್.. ಕೋವಿಡ್ ತಡೆ ಬಗ್ಗೆ ಜಾಗೃತಿ ಮೂಡಿಸಲು ಜನಪ್ರತಿನಿಧಿಗಳಿಗೆ ಸಿಎಂ ಸೂಚನೆ
ಪ್ರಧಾನಿಯವರ ರ್ಯಾಲಿಗೆ ಅವಕಾಶ ಇದೆಯಲ್ಲ ಎಂಬ ಕೈ ನಾಯಕರ ಪ್ರಶ್ನೆಗೆ ಉತ್ತರಿಸಿದ ಕಾರಜೋಳ, ಪ್ರಧಾನಿಯವರ ರ್ಯಾಲಿಗೆ ಅನುಮತಿ ನೀಡ್ತಾರೆ ಎಂಬ ಪ್ರಶ್ನೆ ಅಲ್ಲ. ರಾಜ್ಯದಲ್ಲಿ ಜನರ ಆರೋಗ್ಯ ಕಾಪಾಡೋದಷ್ಟೇ ಮುಖ್ಯ ಎಂದರು.
ಜನರ ರಕ್ಷಣೆ ಮಾಡುವುದಕ್ಕಾಗಿ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿದೆ. ಸರ್ಕಾರ ಯಾವುದೇ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡ್ತಿಲ್ಲ. ಮುಂದೆ ಸಮಯ-ಸಂದರ್ಭ ನೋಡಿಕೊಂಡು ಪಾದಯಾತ್ರೆ ಮಾಡಲಿ ಎಂದು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದರು.