ಬೆಂಗಳೂರು: ಶಿವಾನಂದ ಮೇಲ್ಸೇತುವೆಯ ಬಳಿ ಆಮ್ ಆದ್ಮಿ ಪಕ್ಷದ ನೂರಾರು ಕಾರ್ಯಕರ್ತರು '40% ಕಮಿಷನ್ ಮೇಲ್ಸೇತುವೆ' ಎಂಬ ನಾಮ ಫಲಕವನ್ನು ಸಾಂಕೇತಿಕವಾಗಿ ಉದ್ಘಾಟಿಸಿ ರಾಜಧಾನಿಯ ಜನತೆಗೆ ಲೋಕಾರ್ಪಣೆ ಮಾಡುತ್ತೇವೆ ಎಂದು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ಈ ಸ್ಟೀಲ್ ಮೇಲ್ಸೇತುವೆ 19 ಕೋಟಿಗೆ ಆರಂಭಗೊಂಡು 7 ವರ್ಷಗಳ ನಂತರ 39 ಕೋಟಿ ರೂಪಾಯಿ ವೆಚ್ಚ ಮಾಡಿಯೂ ಸಹ ಅತ್ಯಂತ ಕಳಪೆ ಕಾಮಗಾರಿಯಾಗಿದೆ. ಈ ಮೂಲಕ ಬಿಜೆಪಿ ಸರ್ಕಾರ ಬೆಂಗಳೂರಿಗರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ರೀತಿಯ ಅನೇಕ ಕಾಮಗಾರಿಗಳನ್ನು ಬಿಜೆಪಿ ಸರ್ಕಾರವು 3 ಮತ್ತು 4 ಪಟ್ಟು ಹೆಚ್ಚಿಸಿ ಸಮಯ ವ್ಯರ್ಥ ಮಾಡಿ 40 % ಕಮಿಷನ್ ದಂಧೆಯಲ್ಲಿ ಮುಳುಗಿದೆ. ಮುಂದಿನ ದಿನಗಳಲ್ಲಿ ಜನತೆ ಈ ಎಲ್ಲ ದುರಾಡಳಿತಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು.
ಇದನ್ನೂ ಓದಿ: ರಾಜಧಾನಿಯ ಜನತೆಗೆ ಮತ್ತೊಂದು ಬರೆ: ಪಾರ್ಕಿಂಗ್ ಪಾಲಿಸಿ 2.0 ಜಾರಿಗೆ ಮುಂದಾದ ಬಿಬಿಎಂಪಿ