ಮಾನ್ಸೂನ್ ಮಳೆ ಅಂದ್ರೇ ಒಂದ್ರೀತಿ ಜೂಜು ಇದ್ದಂತೆ. ಆ ಮಾತು ಈ ಸಾರಿಯೂ ನಿಜವಾಯ್ತು.. ಹಾಳಾಗಿರುವ ಬೆಳೆಗಳನ್ನ ನೋಡಿದ್ರೇ ರೈತನ ಸ್ಥಿತಿ ಎಂಥದ್ದೆಂದು ಅರ್ಥವಾಗುತ್ತೆ.
ರಾಜ್ಯದಲ್ಲೀಗ ವರುಣಾರ್ಭಟ ಕಡಿಮೆಯಾದ್ರೂ ನದಿಗಳ ಅಬ್ಬರ ಮಾತ್ರ ನಿಂತಿಲ್ಲ. ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗದ ಜನ್ರು ಈ ಬಾರಿ ಸತತ ಎರಡನೇ ಬಾರಿಗೂ ಪ್ರವಾಹ ಎದುರಿಸುತ್ತಿದ್ದಾರೆ. ಹೀಗಾಗಿ, ನದಿಗಳು ಉಕ್ಕಿ ಹರಿದ ಪರಿಣಾಮ ಮನೆ-ಮಠದ ಜತೆಗೆ ಬೆಳೆದ ಬೆಳೆಗಳನ್ನ ಕಳೆದುಕೊಳ್ತಿದ್ದಾರೆ. ರೈತರ ಜೀವನ ನೀರಿನ ಸುಳಿಯಲ್ಲಿ ಸಿಲುಕಿದಂತಾಗಿದೆ.
ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡುಗು, ಮೈಸೂರು, ಶಿವಮೊಗ್ಗ, ಉತ್ತರಕನ್ನಡ, ಉಡುಪಿ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮುಸುಕಿನ ಜೋಳ, ಈರುಳ್ಳಿ, ಜೋಳ, ರಾಗಿ, ಭತ್ತ, ಕಬ್ಬು, ಹತ್ತಿ, ತೊಗರಿ, ಉದ್ದು, ಸೂರ್ಯಕಾಂತಿ, ಸಜ್ಜೆ, ಶೇಂಗಾ, ಎಳ್ಳು, ತಂಬಾಕು, ಸೋಯಾ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಜತೆಗೆ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ಸಪೋಟ, ಟೊಮ್ಯಾಟೊ, ಬದನೆ, ಹೂಕೋಸ್ ಮತ್ತಿತರ ಬೆಳೆಗಳು ಮಳೆಯಿಂದಾಗಿ ಮುಳುಗಿವೆ.
ಲಾಕ್ಡೌನ್ ವೇಳೆ ಕೃಷಿ ಉತ್ಪನ್ನಗಳನ್ನು ಮಾರ್ಕೇಟ್ಗೆ ಸಾಗಿಸಲಾಗದೇ ಕೊಳೆತಿವೆ. ರಾಜ್ಯದ ಸುಮಾರು 89 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಅಂದಾಜು 3.5 ಕೋಟಿಯಿಂದ 4 ಸಾವಿರ ಕೋಟಿ ರೂ. ನಷ್ಟವಾಗಿದೆ. ಸರ್ಕಾರ ಪರಿಹಾರದ ಬಗ್ಗೆ ಮಾತಾಡ್ತಿದೆ. ಆದರೆ, ಅದು ರೈತರ ಕೈಗೆ ಸೇರೋದ್ಯಾವಾಗೋ ಏನೋ..
ಮುಸುಕಿನ ಜೋಳ 22,289 ಹೆಕ್ಟೇರ್, ಜೋಳ 232, ರಾಗಿ 16.44, ತೊಗರಿ 18,592, ಕಬ್ಬು 21,160 ಹೆಕ್ಟೇರ್ , ಶೇಂಗಾ 3, 199 . 33 ಹೆಕ್ಟೇರ್, ಭತ್ತ 8,947 ಹೆಕ್ಟೇರ್ , ಸೋಯಾ 9,986, ಹೆಕ್ಟೇರ್ ಹೆಸರು 37,623, ಹೆಕ್ಟೇರ್ ತಂಬಾಕು 140 ಹೆಕ್ಟೇರ್ ಹಾಗೂ ಇತರ ಧಾನ್ಯಗಳು ಸೇರಿ 4,911.83 ಹೆಕ್ಟೇರ್ನಷ್ಟು ಬೆಳೆ ನಷ್ಟವಾಗಿವೆ.
ಮುಂಗಾರು ಮಳೆ ಆಧರಿಸಿ 1,52,366 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. ಈ ಬೆಳೆಗೆ ಫಂಗಸ್ನಿಂದ ‘ಸ್ಟೆಂ ಫೀಲಿಯಂ’ ರೋಗ ಅಂಟಿದೆ. ಕೊಳೆ ಹಾಗೂ ಮಜ್ಜಿಗೆ ರೋಗ ಕೂಡ ಬಾಧಿಸಿದೆ. ಬಳ್ಳಾರಿ, ಕೊಪ್ಪಳ, ಹಾವೇರಿ, ಧಾರವಾಡ, ದಾವಣಗೆರೆ, ಬೆಳಗಾವಿ, ಚಿತ್ರದುರ್ಗ ಮತ್ತು ಗದಗ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆ ಶೇ.20ರಷ್ಟು ಅಂದರೆ 1.52 ಲಕ್ಷ ಹೆಕ್ಟೇರ್ನಲ್ಲಿ 30 ಸಾವಿರ ಹೆಕ್ಟೇರ್ ನಷ್ಟವಾಗಲಿದೆ ಅಂತಾರೆ ಕೃಷಿ ತಜ್ಞರು.
ಇತ್ತ ಈರುಳ್ಳಿ ಉತ್ಪಾದನೆಯಲ್ಲಿ ಕರ್ನಾಟಕ ದೇಶದ 4ನೇ ಅತಿದೊಡ್ಡ ರಾಜ್ಯ. ಪ್ರತಿವರ್ಷ 1.2 ಲಕ್ಷದಿಂದ 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗ್ತದೆ. ಆದರೆ, ಬೆಳ್ಳುಳ್ಳಿ ಬೆಲೆ ಕ್ವಿಂಟಲ್ಗೆ 14,000 ರೂ. ತಲುಪಿ ಮತ್ತೆ ದಾಖಲೆ ಸೃಷ್ಟಿಸಿ ರೈತರಲ್ಲಿ ಸಂತಸ ಮೂಡಿಸಿದೆ. ಇನ್ನು ಈರುಳ್ಳಿ ಬೆಲೆ ಮಾತ್ರ ಸ್ಥಿರವಾಗಿದೆ.
ಬೆಳಗಾವಿಯಲ್ಲಿ ಅತಿವೃಷ್ಟಿಗೆ 32 ಕೋಟಿ ರೂ.ನಷ್ಟು ತರಕಾರಿ ಹಾನಿಗೊಂಡಿದೆ. ಬಳ್ಳಾರಿಯಲ್ಲಿ 1 ಸಾವಿರ ಹೆಕ್ಟೇರ್ ಪೈಕಿ 500 ಹೆಕ್ಟೇರ್ ಈರುಳ್ಳಿ ಬೆಳೆ, ಉತ್ತರ ಕನ್ನಡದಲ್ಲಿ 145.33 ಹೆಕ್ಟೇರ್ನಲ್ಲಿದ್ದ ತರಕಾರಿ ಬೆಳೆ ಹಾಳಾಗಿವೆ. ಸರ್ಕಾರ ಅದ್ಯಾವಾಗ ರೈತರ ನೆರವಿಗೆ ಬರುತ್ತೋ ಗೊತ್ತಿಲ್ಲ.