ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್ನಲ್ಲಿ ಆಂಜನೇಯಸ್ವಾಮಿ ಉದ್ಯಾನದಲ್ಲಿ ನಿನ್ನೆ (ಮಾ.16) 6 ಕಾಗೆಗಳು ಇಂದು (ಮಾ.17) 2 ಕಾಗೆಗಳು ಸಾವನಪ್ಪಿದ್ದು, ಹಕ್ಕಿ ಜ್ವರದ ಭೀತಿ ಮೂಡಿಸಿದೆ.
ತಕ್ಷಣ ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅಲ್ಲಿಯೇ ಬೇರೆ, ಬೇರೆ ಪಕ್ಷಿಗಳು ವಾಸಿಸುತ್ತವೆ. ಆದರೆ, ಕಾಗೆಗಳು ಮಾತ್ರ ಸಾವನಪ್ಪಿರುವುದರಿಂದ ವಿಷಪೂರಿತ ಆಹಾರ ಸೇವನೆ ಮಾಡಿರುವ ಅನುಮಾನವಿದೆ. ಅದಕ್ಕಾಗಿ ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸ್ಥಳೀಯರಾದ ಕೇಶವಮೂರ್ತಿ ತಿಳಿಸಿದರು.
ಪ್ರಯೋಗಾಲಯದ ವರದಿ ಬಂದ ಮೇಲೆ ಸಂಪೂರ್ಣ ಮಾಹಿತಿ ತಿಳಿಯಲಿದ್ದು, ಅಗತ್ಯ ಕ್ರಮಗಳನ್ನು ಸಂಬಂಧಪಟ್ಟ ಅಧಿಕಾರಿಗಳು ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.