ಬೆಂಗಳೂರು : ಕೋವಿಡ್ ನಿಯಮ ಪಾಲನೆ ಕುರಿತು ಬಿಬಿಎಂಪಿ ಹಾಗೂ ನಗರ ಪೊಲೀಸ್ ಆಯುಕ್ತರು ಇಂದು ಟೌನ್ ಹಾಲ್ನಲ್ಲಿ ಸಮನ್ವಯ ಸಭೆ ನಡೆಸಿದರು. ಕಟ್ಟುನಿಟ್ಟಾಗಿ ಜನರು ಮಾಸ್ಕ್ ಧರಿಸುವ ಬಗ್ಗೆ, ಸಾಮಾಜಿಕ ಅಂತರ ಕಾಪಾಡುವ ಬಗ್ಗೆ ಹದ್ದಿನ ಕಣ್ಣಿಡಲು 54 ತಂಡಗಳನ್ನು ಈ ವೇಳೆ ನೇಮಿಸಲಾಗಿದೆ.
![54 teams to put fine on Covid rule breakers](https://etvbharatimages.akamaized.net/etvbharat/prod-images/kn-bng-01-bbmp-police-meeting-7202707_03072021180428_0307f_1625315668_953.jpg)
ನಿಯಮಗಳನ್ನು ಪಾಲಿಸದವರಿಗೆ ದಂಡ ವಿಧಿಸುವ ಜೊತೆಗೆ ಕೋವಿಡ್ ನಿಯಮಗಳನ್ನು ಪಾಲಿಸುವ ಬಗ್ಗೆ ತಿಳುವಳಿಕೆ ನೀಡಬೇಕು. ನಗರದ ಸಾರ್ವಜನಿಕ ಸ್ಥಳ, ವಹಿವಾಟು ನಡೆಯುವ ಸ್ಥಳ, ಮದುವೆ ಸಮಾರಂಭ, ಮಾರುಕಟ್ಟೆ ಪ್ರದೇಶಗಳಲ್ಲಿ ಕೋವಿಡ್ ನಿಯಮಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
![54 teams to put fine on Covid rule breakers](https://etvbharatimages.akamaized.net/etvbharat/prod-images/kn-bng-01-bbmp-police-meeting-7202707_03072021180428_0307f_1625315668_1061.jpg)
ಮುಂದಿನ ದಿನಗಳಲ್ಲಿ ನಗರದಲ್ಲಿ ಎಲ್ಲಾ ವಹಿವಾಟುಗಳಿಗೆ ವಿನಾಯಿತಿ ಸಿಗಲಿದ್ದು, ಪಾಲಿಕೆ ಮೇಲೆ ಹೆಚ್ಚು ಜವಾಬ್ದಾರಿ ಬರುತ್ತದೆ. ಈ ವೇಳೆ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸಿಬೇಕಾಗುತ್ತದೆ. ಮಾರ್ಷಲ್ಗಳು, ಹೋಮ್ ಗಾರ್ಡ್ಗಳ ಜೊತೆಗೆ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕೋವಿಡ್ ನಿಯಮಗಳನ್ನು ಪಾಲಿಸಲು ನಾಗರಿಕರಿಗೆ ತಿಳುವಳಿಕೆ ನೀಡಬೇಕು. ಎಲ್ಲೆಲ್ಲಿ ಕೋವಿಡ್ ನಿಯಮಗಳು ಪಾಲಿಸುತ್ತಿಲ್ಲವೋ ಅಲ್ಲಿ ದಂಡ ವಿಧಿಸುವ ಕೆಲಸ ಆಗಬೇಕು ಎಂದು ಹೇಳಿದರು.
![54 teams to put fine on Covid rule breakers](https://etvbharatimages.akamaized.net/etvbharat/prod-images/kn-bng-01-bbmp-police-meeting-7202707_03072021180428_0307f_1625315668_722.jpg)
ದಂಡ ವಿಧಿಸುವ ಸಲುವಾಗಿ 54 ತಂಡಗಳನ್ನು ರಚನೆ ಮಾಡಲಾಗಿದೆ. ಒಂದು ತಂಡದಲ್ಲಿ 4 ಜನ ಮಾರ್ಷಲ್ಗಳಿರುತ್ತಾರೆ. ಅವರು ಹೆಚ್ಚು ಜನದಟ್ಟಣೆಯಿರುವ ಸ್ಥಳಗಳಿಗೆ ತೆರಳಿ ನಿಯಂತ್ರಣ ಮಾಡುತ್ತಾರೆ. ಅಲ್ಲದೆ ಕೋವಿಡ್ ನಿಯಮಗಳನ್ನು ಪಾಲಿಸದೆ ಹೆಚ್ಚು ಉಲ್ಲಂಘನೆಯಾಗುವ ಸ್ಥಳಗಳಲ್ಲಿ ವಲಯ ಹಿರಿಯ ಅಧಿಕಾರಿಗಳು, ಆರೋಗ್ಯಾಧಿಕಾರಿ, ಆರೋಗ್ಯ ವೈದ್ಯಾಧಿಕಾರಿಗಳ ತಂಡವು ಸ್ಥಳ ಪರಿಶೀಲನೆ ನಡೆಸಿ ನೋಟಿಸ್ ನೀಡಿ ಬೀಗಮುದ್ರೆ ಹಾಕುವ ಕೆಲಸ ಮಾಡಿದಾಗ ನಾಗರಿಕರು ಕೋವಿಡ್ ನಿಯಮಗಳನ್ನು ಪಾಲಿಸುತ್ತಾರೆ ಎಂದರು.
ನಗರದ ಬಹುತೇಕ ಕಡೆ ಪಾದಚಾರಿ ಮಾರ್ಗಗಳಲ್ಲಿ ವಾಹನಗಳ ಪಾರ್ಕಿಂಗ್, ತಳ್ಳುವ ಗಾಡಿಗಳ ಮೂಲಕ ವ್ಯಾಪಾರ, ಕಟ್ಟಡ ನಿರ್ಮಾಣ ಸಾಮಗ್ರಿಗಳು ಸೇರಿದಂತೆ ಇನ್ನಿತರೆ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಈ ಸಂಬಂಧ ಪಾಲಿಕೆ ಅಧಿಕಾರಿಗಳ ಜೊತೆಗೆ ಪೊಲೀಸ್ ಸಿಬ್ಬಂದಿ ಸಹಕರಿಸಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಆಗಬೇಕಿದೆ ಎಂದರು.
ನಗರ ಪೊಲೀಸ್ ಆಯುಕ್ತರು ಶ್ರೀ ಕಮಲ್ ಪಂಥ್ ಮಾತನಾಡಿ, ನಗರದಲ್ಲಿ ಕೋವಿಡ್ ಸೋಂಕು ತಡೆಯಲು ಹಲವು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ಮಾರ್ಷಲ್ಗಳು ದಂಡ ವಿಧಿಸುವ ವೇಳೆ ವಾಗ್ವಾದ/ಹಲ್ಲೆ ನಡೆದರೆ,ಪೊಲೀಸ್ ಸಿಬ್ಬಂದಿಯು ಭದ್ರತೆ ಕಲ್ಪಿಸುವ ಜೊತೆಗೆ ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.