ಬೆಂಗಳೂರು : ಯೋಜನೆ ಇಲಾಖೆಗೆ ಸಂಬಂಧಿಸಿದ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಮಾಜಿ ರಾಜ್ಯಸಭಾ ಸದಸ್ಯರ ಅವಧಿಯಲ್ಲಿ ವೆಚ್ಚವಾಗದೆ ಉಳಿದಿರುವ 2,84,92,608 ರೂ. ಹಣವನ್ನು ಹಾಲಿ ಸದಸ್ಯರಿಗೆ ಹಂಚಲಾಗಿದೆ.
ಈ ಅನುದಾನವನ್ನು ಸದಸ್ಯರು ತುರ್ತಾಗಿ ಕೋವಿಡ್-19 ನಿರ್ವಹಣೆಗೆ ಬಳಸಿಕೊಳ್ಳುವಂತೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಹಾಲಿ 12 ಜನ ರಾಜ್ಯಸಭಾ ಸದಸ್ಯರಿದ್ದು, ತಲಾ 23,74,384 ರೂ. ಗಳನ್ನು ಹಂಚಿಕೆ ಮಾಡಲಾಗಿದೆ. ಹಂಚಿಕೆ ಮಾಡಿರುವ ಹಣಕ್ಕೆ ಸದಸ್ಯರು ಆಯಾ ಜಿಲ್ಲಾಧಿಕಾರಿಗಳಿಗೆ ಕ್ರಿಯಾ ಯೋಜನೆ ನೀಡಿ ಬಳಕೆ ಮಾಡಿಕೊಳ್ಳಬೇಕು.
ಪ್ರಸ್ತುತ ಕೊರೊನಾ ಎರಡನೇ ಅಲೆ ಇರುವ ಕಾರಣ, ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೆರವಾಗುವ ರೀತಿಯಲ್ಲಿ ಸದಸ್ಯರು ಅನುದಾನವನ್ನು ಬಳಸಬೇಕು.
ಪ್ರಸ್ತುತ ಇರುವ ಕೊರೊನಾ ಎರಡನೇ ಅಲೆ ನಿಯಂತ್ರಣದ ಜೊತೆಗೆ ಕೊರೊನಾ ಮೂರನೆ ಅಲೆ ಬಂದಲ್ಲಿ, ಅದನ್ನು ಎದುರಿಸಲು ಇನ್ನಷ್ಟು ಬಲ ಬರಲಿದೆ ಎಂದು ಸಚಿವ ನಾರಾಯಣಗೌಡ ರಾಜ್ಯಸಭಾ ಸದಸ್ಯರಲ್ಲಿ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆ ಸಹ ರಾಜ್ಯಸಭಾ ಸದಸ್ಯರು ಈ ಅನುದಾನವನ್ನು ಕೋವಿಡ್-19 ನಿರ್ವಹಣೆಗಾಗಿ ಬಳಸಿಕೊಳ್ಳುವಂತೆ ಮನವಿ ಮಾಡಿದೆ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ರಾಜ್ಯಸಭಾ ಸದಸ್ಯರಾದ ಕೆ.ಸಿ. ರಾಮಮೂರ್ತಿ, ನಿರ್ಮಲಾ ಸೀತಾರಾಮನ್, ಡಾ. ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್, ರಾಜೀವ್ ಚಂದ್ರಶೇಖರ್, ಕೆ. ನಾರಾಯಣ, ಬಳ್ಳಾರಿ ಜಿಲ್ಲೆಯ ಸೈದ್ ನಾಸಿರ್ ಹುಸೇನ್, ಬೆಳಗಾವಿಯ ಈರಣ್ಣ ಕಡಾಡಿ, ಚಿಕ್ಕಮಗಳೂರಿನ ಜೈರಾಮ್ ರಮೇಶ್, ಹಾಸನದ ಹೆಚ್.ಡಿ. ದೇವೇಗೌಡರು, ಕಲಬುರಗಿಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಉಡುಪಿ ಜಿಲ್ಲೆಯ ಆಸ್ಕರ್ ಫರ್ನಾಂಡಿಸ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯಸಭಾ ಸದಸ್ಯರ ಈ ಅನುದಾನವನ್ನು ಕೋವಿಡ್-19 ನಿರ್ವಹಣೆಗಾಗಿ ಬಳಸಿಕೊಳ್ಳಬಹುದಾಗಿದೆ.