ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ದುಂಗರ್ ಚಂದ್ ಮತ್ತು ಕಿರಣ್ ಜೈನ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯಾವಳಿಯ ಸೋಲು - ಗೆಲುವಿನ ಬಗ್ಗೆ ಬೆಟ್ಟಿಂಗ್ ಮಾಡುತ್ತಿದ್ದರು. ಸಾರ್ವಜನಿಕರ ಮೊಬೈಲ್ ಫೋನ್ ಮೂಲಕವೇ ಹಣವನ್ನು ಪಣವಾಗಿ ಕಟ್ಟಿಸಿ ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿದ್ದರು ಎನ್ನಲಾಗ್ತಿದೆ.
ಇಬ್ಬರು ವ್ಯಕ್ತಿಗಳು ಹಿಂದಿನ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಗೆದ್ದವರಿಗೆ ಹಣ ಕೊಡಲು ಮತ್ತು ಸೋತವರಿಂದ ಹಣ ಪಡೆಯಲು ಹಲಸೂರುಗೇಟ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸೇರಿದ್ದಾರೆ. ಈ ಮಾಹಿತಿ ಪಡೆದು ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 2,00,000 ನಗದು, 2 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.