ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರವನ್ನು ಪಾಲಿಕೆಯ ಎಲ್ಲ 12 ವಿದ್ಯುತ್ ಚಿತಾಗಾರಗಳಲ್ಲೂ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ನಗರದ ಕೆಸಿ ಜನರಲ್, ರಾಜಾಜಿನಗರದ ಇಎಸ್ಐ, ಲೈಫ್ಸೆಲ್ ಲ್ಯಾಬ್, ವಿಕ್ಟೋರಿಯಾ ಹಾಗೂ ಕಿದ್ವಾಯಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಕೋವಿಡ್ ಸೋಂಕು ಪರೀಕ್ಷೆ ಮತ್ತು ಚಿಕಿತ್ಸೆ, ಲ್ಯಾಬ್ ಹಾಗೂ ಲಸಿಕೆ ನೀಡುವುದನ್ನು ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿ, ನಗರದ 12 ವಿದ್ಯುತ್ ಚಿತಾಗಾರಗಳಲ್ಲೂ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ನಡೆಸುವುದರಿಂದ ಸಮಸ್ಯೆ ಆಗುವುದಿಲ್ಲ. ಅಲ್ಲದೆ ನಗರದಲ್ಲಿ ಕೊರೊನಾ ಸೋಂಕು ಪರೀಕ್ಷೆ ಹೆಚ್ಚಿಸಿ ಹಾಗೂ 24 ಗಂಟೆಯ ಒಳಗೆ ವರದಿ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ತಾಕೀತು ಮಾಡಿದರು.
ನಂತರ ರಾತ್ರಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಔಷಧ ನಿಯಂತ್ರಕ ಸುರೇಶ್ ಅವರ ಜತೆ ಕೋವಿಡ್ ಹಿನ್ನೆಲೆ ಔಷಧ ಸರಬರಾಜಿನಲ್ಲಿ ಆಗುತ್ತಿರುವ ಲೋಪಗಳ ಕುರಿತು ಚರ್ಚಿಸಿದರು. ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ 400 ಬೆಡ್ಗೆ ಅವಕಾಶ ಇದ್ದರೂ ಆಮ್ಲಜನಕದ ಕೊರತೆ ಇದೆ. ಹೀಗಾಗಿ ಒಂದು ಟ್ಯಾಂಕರ್ ಆಮ್ಲಜನಕ ಸರಬರಾಜು ಮಾಡಲು ಡಿಸಿಎಂ ಸೂಚಿಸಿದರು.

ಕೆಸಿ ಜನರಲ್ ಆಸ್ಪತ್ರೆಯಲ್ಲಿ 8 ಸಾವಿರ ಲೀಟರ್ ಸಾಮರ್ಥ್ಯದ ಆ್ಯಕ್ಸಿಜನ್ ಘಟಕ ಇದೆ. ಈ ಮೂಲಕ ನಿತ್ಯ 4 ಸಾವಿರ ಲೀಟರ್ ಆಕ್ಸಿಜನ್ ಬಳಕೆ ಆಗುತ್ತಿದೆ ಎಂದು ಕೆಸಿ ಜನರಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ವೆಂಕಟೇಶಯ್ಯ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅನುದಾನ
ಪಾಲಿಕೆ ವ್ಯಾಪ್ತಿಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಸಿಬ್ಬಂದಿ ಹಾಗೂ ವೈದ್ಯರು ಕೊರೊನಾ ಸೋಂಕು ತಡೆಗೆ ಅಗತ್ಯವಾದ ಪರಿಕರ ಖರೀದಿಸಲು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ.

ಅನುದಾನ ಬಳಕೆ ವಿಧಿಸಲಾಗಿರುವ ಷರತ್ತುಗಳು...
ಕೋವಿಡ್ ತಡೆಗೆ ಪೂರಕ ಯೋಜನೆಗಳಿಗೆ ಮಾತ್ರ ಅನುದಾನ ಬಳಸಬೇಕು. ಪಿಪಿಇ ಕಿಟ್, ಎನ್-95 ಮಾಸ್ಕ್, ಸರ್ಜಿಕಲ್ ಮಾಸ್ಕ್ ಸೇರಿದಂತೆ ಅಗತ್ಯ ಸಾಧನಗಳನ್ನು ಮಾತ್ರ ಖರೀದಿ ಮಾಡಬೇಕು. ಕೋವಿಡ್ ಲಸಿಕೆ, ಫಲಾನುಭವಿಗಳನ್ನು ವಾಹನದಲ್ಲಿ ಕರೆತರಲು ಮತ್ತು ಲಸಿಕೆ ಬಗ್ಗೆ ಅರಿವು ಮೂಡಿಸಲು ಅನುದಾನ ಬಳಕೆಯಾಗಬೇಕು. ಯಾವುದೇ ಸಾಧನಗಳ ಖರೀದಿಗೆ ಮುನ್ನ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಅನುಮೋದನೆ ಆಗಬೇಕಾಗಿದೆ.