ಬೆಂಗಳೂರು/ಆನೇಕಲ್: ಗಂಡನ ಕುಟುಂಬದಿಂದ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ಆನೇಕಲ್ ತಾಲೂಕಿನ ನೆರಳೂರಿನಲ್ಲಿ ನಡೆದಿದೆ.
ಕನಕಪುರದ ಹಾರೋಹಳ್ಳಿಯ ಕಾಡಜಕ್ಕನಹಳ್ಳಿ ಮೂಲದ ನಯನಾ (24) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ನೆರಳೂರು ಮೂಲದ ಗಂಡ ಮೋಹನ್, ಅತ್ತೆ ಸುಗುಣ, ನಾದಿನಿ ನಂದ ಮತ್ತು ಸಂಬಂಧಿ ನಂದೀಶ್ ಎರಡು ವರ್ಷದಿಂದ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ನನ್ನ ಮಗಳು ವದಕ್ಷಿಣೆ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ನಯನ ತಂದೆ ವೆಂಕಟೇಶ್ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎರಡು ವರ್ಷದ ಹಿಂದೆ ನಯನಳನ್ನು ಪ್ರೀತಿಸಿ ಮದುವೆಯಾಗಿದ್ದ ಮೋಹನ್ ದಂಪತಿಗೆ ಒಂದು ಹೆಣ್ಣು ಮಗುವಿದೆ. ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.