ದೇವನಹಳ್ಳಿ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ಥೈಲ್ಯಾಂಡ್ನ ಪುಕೆಟ್ಗೆ ತೆರಳಿದ್ದ ವಿಮಾನ ತಾಂತ್ರಿಕ ಕಾರಣದಿಂದ ವಾಪಸ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಗೋ ಏರ್ ಏರ್ಲೈನ್ಸ್ ಸಿಬ್ಬಂದಿ ತಾಂತ್ರಿಕ ಸಮಸ್ಯೆ ಬಗೆಹರಿಸಲು, ಮೂರು ತಾಸು ತೆಗೆದುಕೊಂಡಿದ್ದಾರೆ. ಕೊನೆಗೆ ವಿಮಾನ ಬೆಳಗ್ಗೆ ಟೆಕ್ ಆಫ್ ತೆಗೆದುಕೊಳ್ಳುವಾಗ ಮಂಜು ಕವಿದ ವಾತಾವರಣ ವಿಮಾನ ಹಾರಾಟಕ್ಕೆ ತೊಂದರೆಯಾಗಿತ್ತು. ಹೀಗಾಗಿ ಪ್ರಯಾಣಿಕರು ಸತತ ಆರು ತಾಸು ವಿಮಾನದಲ್ಲಿಯೇ ಸಮಯ ಕಳೆಯುವಂತಾಗಿದೆ. ಗೋ ಏರ್ ಸಂಸ್ಥೆಯ ನಿರ್ಲಕ್ಷ್ಯತೆಗೆ ಬೇಸತ್ತ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ರು.
ಕೆಐಎಎಲ್ನಿಂದ ಥೈಲ್ಯಾಂಡ್ನ ಪುಕೆಟ್ಗೆ ಫ್ಲೈಟ್ ನಂಬರ್ G8041 ಟೆಕ್ ಆಫ್ ಆಗಿತ್ತು. ವಿಮಾನದಲ್ಲಿ 173 ಪ್ರಯಾಣಿಕರಿದ್ದರು. ಟೆಕ್ಆಪ್ ಆದ ವಿಮಾನ, ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ಕಾರಣದಿಂದ ಮಧ್ಯರಾತ್ರಿ 2.15 ಗಂಟೆಗೆ ವಾಪಸ್ ಕೆಐಎಎಲ್ಗೆ ಬಂದಿತ್ತು. ಬಳಿಕ ತಾಂತ್ರಿಕ ಸಮಸ್ಯೆ ಸರಿಪಡಿಸಿದ ಸಿಬ್ಬಂದಿಗೆ ಮತ್ತೆ ಮಂಜು ಹಾರಾಟಕ್ಕೆ ತೊಂದರೆಯನ್ನುಂಟು ಮಾಡಿತು. ಇದರಿಂದ ಪುಕೆಟ್ನಲ್ಲಿ ಇಂದು ಬೆಳಗ್ಗೆ 7: 45ಕ್ಕೆ ಲ್ಯಾಂಡ್ ಆಗಬೇಕಿದ್ದ ವಿಮಾನ ಮಧ್ಯಾಹ್ನ 3 ಗಂಟೆಗೆ ಲ್ಯಾಂಡ್ ಆಗಬೇಕಾಯ್ತು.
ಬೆಳಗ್ಗೆ ಅವರಿಸಿದ್ದ ದಟ್ಟ ಮಂಜಿನಿಂದ 80 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಡಿಪಾರ್ಚರ್ ಆಗಬೇಕಿದ್ದ 60 ವಿಮಾನ ಮತ್ತು 17 ವಿಮಾನಗಳ ಆಗಮನ ಸಮಯದಲ್ಲಿ ವ್ಯತ್ಯಯವಾಗಿದೆ.