ದೊಡ್ಡಬಳ್ಳಾಪುರ : ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಬಿಡುಗಡೆಗಾಗಿ ಮೂರು ದಿನವಾಗಿಲ್ಲ, ಅದಾಗಲೇ ಸಿನಿಮಾ ಪೈರಸಿ ಆಗಿದೆ. ಪೈರಸಿ ಲಿಂಕ್ ಡಿಲೀಟ್ ಮಾಡುವಂತೆ ಒತ್ತಾಯಿಸಿ ಥಿಯೇಟರ್ ಮುಂದೆ ಕರ್ನಾಟಕ ರಾಜರತ್ನ ಪುನೀತ್ ರಾಜ್ ಕುಮಾರ್ ಸೇವಾ ಟ್ರಸ್ಟ್ ನ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ವೈಭವ ಥಿಯೇಟರ್ ಮುಂದೆ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜರತ್ನ ಪುನೀತ್ ರಾಜ್ಕುಮಾರ್ ಸೇವಾ ಟ್ರಸ್ಟ್ ನ ಸದಸ್ಯರು, ಡಾ. ಪುನೀತ್ ರಾಜ್ಕುಮಾರ್ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆ ಆಗಿ ಮೂರು ದಿನವೂ ಸಹ ಕಳೆದಿಲ್ಲ, ಅದಾಗಲೇ ಕೆಲ ಕಿಡಿಗೇಡಿಗಳು ಚಿತ್ರವನ್ನು ಪೈರಸಿ ಮಾಡಿದ್ದಾರೆ. ಪೈರಸಿ ವಿಡಿಯೋ ಕುರಿತಾಗಿ ಮಾಹಿತಿಯನ್ನು ಕಲೆ ಹಾಕಿದ್ದೇವೆ. ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಅರ್ಜುನ್ ವೈ ಎನ್, ಪೈರಸಿ ಮಾಡಿದ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದೇವೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಲಿಂಕ್ಗಳನ್ನ ಡಿಲೀಟ್ ಮಾಡಿಸಬೇಕೆಂದು ಮನವಿ ಮಾಡಿದರು.