ದೇವನಹಳ್ಳಿ (ಬೆ.ಗ್ರಾಮಾಂತರ): ಹೆಣ್ಣಿನ ಶೋಕಿಯಿರುವ ವ್ಯಕ್ತಿಯೊಬ್ಬ ಹಲವು ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು, ಅನ್ಯ ಪುರುಷರೊಂದಿಗೆ ಸಹಕರಿಸುವಂತೆ ತನ್ನ ಹೆಂಡತಿಯನ್ನು ಕಾಡುತ್ತಿದ್ದಾನೆ. ಗಂಡನ ವಿಕೃತ ವರ್ತನೆಗೆ ಬೇಸತ್ತ ಮಹಿಳೆಯು ರಾತ್ರಿಯ ವೇಳೆ ಜೀವ ಕೈಯಲ್ಲಿಟ್ಟುಕೊಂಡು ದಿನ ಕಳೆಯುತ್ತಿದ್ದಾಳೆ.
ದೇವನಹಳ್ಳಿ ತಾಲೂಕಿನ ಚಿಕ್ಕಸಣ್ಣೆಯ ಮಹಿಳೆಯ ತನ್ನ ಗಂಡನ ವಿಕೃತ ವರ್ತನೆಯಿಂದ ನಿತ್ಯ ಕಣ್ಣೀರಿಡುತ್ತಿದ್ದಾಳೆ. ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯ ಕೊತ್ತಕೋಟ ಗ್ರಾಮದ ಈ ಮಹಿಳೆಗೆ 24- 02 - 2000 ರಂದು ತನ್ನ ಸೋದರತ್ತೆಯ ಮಗ ನಾಗರಾಜ್ನೊಂದಿಗೆ ಮದುವೆಯಾಗಿ, ಚಿಕ್ಕಸಣ್ಣೆ ಗ್ರಾಮದಲ್ಲಿ ಇಬ್ಬರ ದಾಂಪತ್ಯ ಶುರುವಾಗಿದೆ.
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ನಾಗರಾಜ್ಗೆ ಕೈ ತುಂಬ ಸಂಬಳ ಬರುತ್ತಿದ್ದು, ಇಬ್ಬರ ದಾಂಪತ್ಯ ಸುಖಕರವಾಗಿತ್ತು. ಆದರೆ ಇವರಿಗೆ ಮಕ್ಕಳಾಗಿರುವುದಿಲ್ಲ, ಮಕ್ಕಳಾಗದ ಕಾರಣ ಗಂಡ ನಾಗರಾಜ್ ಮತ್ತು ಅತ್ತೆ ರಾಮೇಶ್ವರಮ್ಮ ಮಾನಸಿಕ ಕಿರುಕುಳ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಆಗ ನಾಗರಾಜ್ ವಿರುದ್ಧ ದೇವನಹಳ್ಳಿ ಠಾಣೆಲ್ಲಿ ದೂರು ಸಹ ನೀಡಲಾಗಿದ್ದು, ಪೊಲೀಸರು ನಾಗರಾಜ್ನನ್ನು ಕರೆದು ಬುದ್ದಿ ಹೇಳಿ ಕಳಿಸಿದ್ದರು.
ಪೊಲೀಸರ ಮಾತಿಗೆ ಬೆಲೆ ಕೊಡದ ನಾಗರಾಜ್ ಹೆಂಡತಿಗೆ ಮತ್ತೆ ಕಿರುಕುಳ ಕೊಡಲು ಶುರು ಮಾಡಿ, ಮನೆಗೆ ರೇಷನ್ ತರುವುದನ್ನು ನಿಲ್ಲಿಸಿದ್ದ. ಮನೆಯಲ್ಲಿ ಅಕ್ರಮವಾಗಿ ಸೇರಿಕೊಂಡಿದ್ದಾಳೆಂದು ಆಕೆಯ ವಿರುದ್ಧ ದೂರು ನೀಡಿ, ಮನೆಯಿಂದ ಹೊರ ಹಾಕಲು ಯತ್ನಿಸಿದ್ದ. ಇಷ್ಟಕ್ಕೆ ಸುಮ್ಮನಾಗದೇ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಬೆಳೆಸಿ, ಮನೆಗೆ ಅನ್ಯ ಪುರುಷರನ್ನು ಕಳುಹಿಸಿ ಹೆಂಡತಿಗೆ ಕಾಟ ಕೊಡುತ್ತಿದ್ದ.
ನನಗೂ ಮಹಿಳೆಯರೊಂದಿಗೆ ಅನೈತಿಕ ಸಂಬಂಧವಿದೆ, ನೀನು ಅನ್ಯ ಪುರುಷರೊಂದಿಗೆ ಸಹಕರಿಸೆಂದು ಇದೀಗ ಹೆಂಡತಿಗೆ ವಿಕೃತವಾಗಿ ಹಿಂಸೆ ನೀಡುತ್ತಿದ್ದಾನೆ. ರಾತ್ರಿ ವೇಳೆ ಕುಡಿದು ಬಂದು ಜಗಳ ಮಾಡುತ್ತಿದ್ದಾನೆ. ಇದೀಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಗಂಡನ ವರ್ತನೆಯಿಂದ ಬೇಸತ್ತ ಮಹಿಳೆ ವರದಕ್ಷಿಣೆ ಕಿರುಕುಳಕ್ಕೆ ನಾಗರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹೆಂಡತಿಯನ್ನು ಮನೆಯಿಂದ ಹೊರ ಹಾಕಿ ಮತ್ತೊಬ್ಬ ಮಹಿಳೆಯನ್ನು ಮನೆಗೆ ಕರೆತರಲು ನಾಗರಾಜ್ ಯತ್ನಿಸುತ್ತಿದ್ದಾನೆ. ಗಂಡನ ಕಿರುಕುಳಕ್ಕೆ ಹೆದರಿದ ಹೆಂಡತಿ ಬಟ್ಟೆ ಹೊಲೆದು ಜೀವನ ನಡೆಸುತ್ತಿದ್ದಾಳೆ. ಸದ್ಯ ಒಂಟಿಯಾಗಿರುವ ಆಕೆಗೆ ಗಂಡನಿಂದ ಪ್ರಾಣಾಪಾಯವಿದ್ದು, ಪ್ರತಿ ರಾತ್ರಿ ಭಯದಿಂದಲೇ ಕಾಲ ಕಳೆಯುತ್ತಿದ್ದಾಳೆ. ಗಂಡನಿಂದ ರಕ್ಷಣೆ ಕೊಡಿ ಎಂದು ಕಣ್ಣೀರಿಡುತ್ತಿದ್ದಾಳೆ.