ಹೊಸಕೋಟೆ: ಪಕ್ಷದಿಂದ ಹೊರಹಾಕಿದ ಹಿನ್ನೆಲೆಯಲ್ಲಿ ಕೋಪಗೊಂಡ ಅಸಮಾಧಾನಿತ ನಾಯಕರು ಹೊಸಕೋಟೆ ಕಾಂಗ್ರೆಸ್ ಕಚೇರಿಗೆ ಬಣ್ಣ ಬಳಿದು ಕಚೇರಿಗೆ ಬೀಗ ಜಡಿದಿದ್ದಾರೆ. ಇತ್ತೀಚೆಗೆ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊರಿಸಿ ಬ್ಲಾಕ್ ಅಧ್ಯಕ್ಷ ಹೇಮಂತ್ ಕುಮಾರ್ರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ ಆದೇಶ ಹೊರಡಿಸಿದ್ದರು. ಉಚ್ಚಾಟಿತ ಕಾಂಗ್ರೆಸ್ ಟೌನ್ಬ್ಲಾಕ್ ಅಧ್ಯಕ್ಷ ಹೇಮಂತ್ ಇಂದು ಕಚೇರಿ ನಾಮಫಲಕಕ್ಕೆ ಬಣ್ಣ ಬಳಿದು, ಬೀಗ ಹಾಕಿ ಆಕ್ರೋಶ ಹೊರಹಾಕಿದರು.
ಬಳಿಕ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿದ ಹೇಮಂತ್ ಕುಮಾರ್, ಹಲವು ವರ್ಷಗಳಿಂದ ನಮ್ಮ ಮನೆಯಲ್ಲೇ ಕಾಂಗ್ರೆಸ್ ಕಚೇರಿ ಮಾಡಿಕೊಂಡು ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೇವೆ. ಆದರೆ ಶಾಸಕ ಶರತ್ ಬಚ್ಚೇಗೌಡ ಮತ್ತು ಜಿಲ್ಲಾಧ್ಯಕ್ಷ ಸಿ.ಆರ್.ಗೌಡ ಏಕಾಏಕಿ ಪಕ್ಷದಿಂದ ಉಚ್ಛಾಟನೆ ಮಾಡಿ ಮೂಲ ಕಾಂಗ್ರೆಸ್ಸಿಗರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಶರತ್ ಬಚ್ಚೇಗೌಡ ಮತ್ತು ಜಿಲ್ಲಾಧ್ಯಕ್ಷರ ನಡೆ ಖಂಡಿಸಿ ಕಾಂಗ್ರೆಸ್ ತೊರೆದು 50ಕ್ಕೂ ಅಧಿಕ ಮುಖಂಡರು ಒಂದು ಸಾವಿರ ಕಾರ್ಯಕರ್ತರೊಂದಿಗೆ ಫೆಬ್ರವರಿ 13ರಂದು ಎಂಟಿಬಿ ನಾಗರಾಜ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗುವುದಾಗಿ ಹೇಳಿದರು.
ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದರೂ ನ್ಯಾಯ ಸಿಗಲಿಲ್ಲ. 4 ತಿಂಗಳ ಹಿಂದೆಯೇ ನಾವು 50 ಮುಖಂಡರು ನಮಗೆ ಪಕ್ಷದಲ್ಲಿ ಗೌರವ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿ ರಾಜೀನಾಮೆ ನೀಡಿದ್ದೇವೆ. ಆದರೆ ಅದನ್ನೂ ಸ್ವೀಕರಿಸಿಲ್ಲ. ಆದರೀಗ ಉಚ್ಛಾಟನೆ ಮಾಡಿದ್ದಾಗಿ ಜಿಲ್ಲಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಶಾಸಕರು ಕುತಂತ್ರ ರಾಜಕಾರಣ ಮಾಡ್ತಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿ ದುಡಿದಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಎಲ್ಲ ಟೈಮಲ್ಲೂ ಲಾಟರಿ ಹೊಡೆಯುತ್ತದೆಂದು ಭಾವಿಸಬೇಡಿ': ಹೆಚ್ಡಿಕೆ ಕುರಿತು ಸಿ.ಟಿ.ರವಿ ವ್ಯಂಗ್ಯ