ಬೆಂಗಳೂರು/ಆನೇಕಲ್: ಏಷ್ಯಾದ ಜೈವಿಕ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಕರ್ನಾಟಕ 35% ಪಾಲು ಹೊಂದಿದೆ. ಆ ಮೂಲಕ ದೇಶದಲ್ಲಿಯೇ 60% ಅಭಿವೃದ್ದಿ ಹೊಂದಿದ ಖ್ಯಾತಿ ಹೊಂದಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಮೊದಲ ಹಂತದಲ್ಲಿನ ಬೆಂಗಳೂರು ಲೈಫ್ ಸೈನ್ಸ್ ಬಯೋಪಾರ್ಕ್ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ದೇಶದ ಜೈವಿಕ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಕರ್ನಾಟಕ ಸಿಂಹಪಾಲು ಹೊಂದಿದೆ. 380 ಕಂಪನಿಗಳು, 200ಕ್ಕೂ ಹೆಚ್ಚು ಬಯೋಟೆಕ್ ನವೋದ್ಯಮಗಳಿವೆ. ಈ ನಿಟ್ಟಿನಲ್ಲಿ ಜೈವಿಕ ತಂತ್ರಜ್ಞಾನ ಸರ್ಕಾರದ ನಡುವಿನ ಅಂತರ ಕಡಿಮೆಗೊಳಿಸಲು ಪೂರಕ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. 20 ಎಕರೆ ಸಾಂಸ್ಥಿಕ ಪ್ರದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಪಾರ್ಕ್ ಕ್ಯಾಂಪಸ್ ನಿರ್ಮಾಣ, ನವೋದ್ಯಮಿಗಳಿಗಾಗಿ 10 ಎಕರೆ, 52 ಎಕರೆ ಕೈಗಾರಿಕಾ ಕ್ಲಸ್ಟರ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ 150 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ಬೆಂಗಳೂರು ಲೈಫ್ ಸೈನ್ಸ್ ಪಾರ್ಕ್ ಪರಿಧಿಯಲ್ಲಿ 150 ಕಂಪನಿಗಳು 50,000 ಉದ್ಯೋಗ ಸೃಷ್ಟಿಸುವಲ್ಲಿ ಸಫಲವಾಗುವ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ, ದೇವೇಗೌಡರು ಭೂಸುಧಾರಣಾ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದನ್ನು ಪ್ರಸ್ತಾಪಿಸಿದರು. ದೇಶದ ಉದ್ಯಮಗಳ ಅಭಿವೃದ್ದಿಗೆ ಕೇವಲ 2% ಸ್ಥಳಾವಕಾಶ ಸಾಕಾಗುವುದಿಲ್ಲ. ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಉತ್ತಮ ಸ್ಥಳಾವಕಾಶ, ಪೂರ್ಣ ಸಹಕಾರ ನೀಡಿದ್ದಲ್ಲಿ ಮಾತ್ರ ದೇಶದ ಅಭಿವೃದ್ಧಿಗೆ ಬಂಡವಾಳ ಹೂಡಿಕೆದಾರರು ಇಲ್ಲಿ ನೆಲೆಗೊಳ್ಳುತ್ತಾರೆ. ಈವರೆಗೆ 79 ಎಬಿಸಿ ನಿಯಮಗಳಿಂದ ಭ್ರಷ್ಟಾಚಾರವಷ್ಟೇ ನಡೆದಿದೆ. ಕೆಐಎಡಿಬಿಯನ್ನೇ ನೆಚ್ಚಿಕೊಂಡು ಭ್ರಷ್ಟಾಚಾರಕ್ಕೆ ಇಳಿದಿದ್ದ ಹಿಂದಿನ ಸರ್ಕಾರಗಳು ರಾಜಕೀಯ ಪ್ರೇರಿತರಾಗಿ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಕುಟುಕಿದ್ದಾರೆ.