ಬಾಗಲಕೋಟೆ: ಜಿಲ್ಲೆಯ ಮೂರು ತಾಲೂಕುಗಳಲ್ಲಿ ನೀರಿನ ತೀವ್ರ ಕೊರತೆಯಿರುವ ಹಿನ್ನೆಲೆ ಜುಲೈ 1ರಿಂದ ಸೆಪ್ಟೆಂಬರ್ 15ರವರೆಗೆ ಜಲಶಕ್ತಿ ಅಭಿಯಾನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿರ್ದೇಶಕ ಕೆ.ಎಂ. ಮಹೇಶ ಕರೆ ನೀಡಿದ್ದಾರೆ.
ಜಿಪಂ ಸಭಾ ಭವನದಲ್ಲಿ ಈ ಕುರಿತು ಜರುಗಿದ ಜನಶಕ್ತಿ ಅಭಿಯಾನ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬಾಗಲಕೋಟೆ, ಬಾದಾಮಿ ಹಾಗೂ ಮುಧೋಳ ತಾಲೂಕುಗಳಲ್ಲಿ ನೀರಿನ ಕೊರತೆ ಕಂಡು ಬಂದಿದ್ದರಿಂದ ಈ ಭಾಗದಲ್ಲಿ ನೀರಿನ ಸದ್ಬಳಕೆ ಹಾಗೂ ನೀರಿನ ಸಂಪನ್ಮೂಲ ಪುನರ್ಜಿವನ ಕುರಿತು, ನೀರಿನ ಅವಶ್ಯಕತೆ ಮುಂದಿನ ಪೀಳಿಗೆಗೆ ದೊರಕುವ ಸಲುವಾಗಿ ಸದ್ಯ ಯಾವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಿದರು.
ಮುಧೋಳ ಭಾಗದಲ್ಲಿ ಕಬ್ಬು ಬೆಳೆಯನ್ನು ಹೇರಳವಾಗಿ ಬೆಳೆಯುತ್ತಿರುವುದರಿಂದ, ಆ ಭಾಗದ ರೈತರು ಹೆಚ್ಚು ನೀರು ಬಳಸಿ ಉತ್ಪನ್ನ ಹೆಚ್ಚಿಸಬಹುದೆಂಬ ತಪ್ಪು ಕಲ್ಪನೆಯಿಂದ ಅವಶ್ಯಕತೆಗೆ ಮೀರಿ ನೀರು ಬಳಸಿದ್ದರಿಂದ ಅಲ್ಲಿಯ ಭೂಮಿ ಸವಳು-ಜವಳು ಆಗಿದೆ. ಈ ನಿಟ್ಟಿನಲ್ಲಿ ನೀರಿನ ಕೊರತೆ ಕಂಡುಬಂದಿದೆ. ಅದರಂತೆ ಬಾದಾಮಿ ತಾಲೂಕಿನಲ್ಲಿ ಕೆಂಪು ಹಾಗೂ ಮರಳು ಭೂಮಿಯಾಗಿದ್ದರಿಂದ ನೀರಿನ ಕೊರತೆ ಉಂಟಾಗಿದೆ ಎಂದರು.
ಬಾಗಲಕೋಟೆ ಭಾಗದಲ್ಲಿ ಕಲಾದಗಿ ಭಾಗ ಸುಣ್ಣದ ಪ್ರಮಾಣ ಹೆಚ್ಚಾಗಿದ್ದು, ಮೀತಿ ಮೀರಿದ ಬೋರವೆಲ್ಗಳ ಕೊರತೆಯಿಂದಾಗಿ ನೀರಿನ ಕೊರತೆ ಕಂಡುಬಂದಿದೆ. ಆದ್ದರಿಂದ ಈ ಮೂರು ಭಾಗಗಳಲ್ಲಿ ನೀರಿನ ಸದ್ಬಳಕೆ ಹಾಗೂ ಸಂರಕ್ಷಣೆ ಕುರಿತು ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರೇತರ ಸಂಸ್ಥೆಗಳು, ಶಾಲಾ ಮಕ್ಕಳು ಹಾಗೂ ಗ್ರಾಮದ ಮುಖ್ಯಸ್ಥರನ್ನು ಒಳಗೊಂಡಂತೆ ಗ್ರಾಮೀಣ ಮಟ್ಟದಲ್ಲಿ ಜಲಶಕ್ತಿ ಅಭಿಯಾನದ ಕಾರ್ಯ ಚಟುವಟಿಕೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿದರು.
ನೀರಿನ ಸಂರಕ್ಷಣೆ ಮೂಲಗಳಾದ ಕೆರೆ, ಕೃಷಿ ಹೊಂಡ, ಬಾವಿ ಸಂರಕ್ಷಣೆ ಹಾಗೂ ಪುನರುಜ್ಜೀವನಗೊಳಿಸುವುದು. ಸಮಗ್ರ ಜಲಾನಯನ ಮಳೆ ನೀರನ್ನು ಸಂಗ್ರಹಿಸುವ ಸಲುವಾಗಿ ಮಳೆ ನೀರು ಕೊಯ್ಲು ಕಾರ್ಯಕ್ರಮಗಳನ್ನು ಸರ್ಕಾರಿ ಕಚೇರಿ ಹಾಗೂ ಆವರಣಗಳಲ್ಲಿ ಹಮ್ಮಿಕೊಳ್ಳಬೇಕು. ಮೂರು ತಾಲೂಕುಗಳಲ್ಲಿ ತಲಾ ಒಂದು ಕಿರು ಜಲಾನಯನ ಪ್ರದೇಶ ಆಯ್ಕೆ ಮಾಡಿಕೊಂಡು, ಜಲಾನಯನ ಅಭಿವೃದ್ದಿ ಮತ್ತು ಮಹಾತ್ಮಾ ಗಾಂಧಿ ನರೇಗಾ ಯೋಜನೆ ಹಾಗೂ ಅರಣ್ಯ ಇಲಾಖೆಯನ್ನ ಒಗ್ಗೂಡಿಸಿ ಅನುಷ್ಠಾನಗೊಳಿಸಲು ತಿಳಿಸಿದರು.