ಬಾಗಲಕೋಟೆ: ಸ್ಮಶಾನಕ್ಕೆ ಜಾಗ ಇಲ್ಲದೇ ಪಂಚಾಯಿತಿ ಮುಂದೆಯೇ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ಮುಂದಾದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ನಡೆದಿದೆ. ಕಳೆದ ಹಲವು ದಿನಗಳಿಂದ ಸ್ಮಶಾನಕ್ಕಾಗಿ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲವಂತೆ. ಈ ನಡುವೆ, ಕಾಳಪ್ಪ ಕಂಬಾರ ಎಂಬ ವ್ಯಕ್ತಿ ಅಸಹಜವಾಗಿ ಮೃತಪಟ್ಟಿದ್ದು ಅವರ ಶವಸಂಸ್ಕಾರ ಮಾಡಲು ಸ್ಥಳವಿಲ್ಲದೆ ಆಕ್ರೋಶಗೊಂಡ ಗ್ರಾಮಸ್ಥರು ಪಂಚಾಯಿತಿ ಮುಂದೆಯೇ ಅಂತ್ಯಸಂಸ್ಕಾರ ಮಾಡಲು ಮುಂದಾದರು.
ಇದರಿಂದ ಕೆಲ ಸಮಯ ಗೊಂದಲಮಯ ವಾತಾವರಣ ಉಂಟಾಗಿತ್ತು. ಸ್ವಂತ ಜಮೀನು ಇರುವವರು ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡುತ್ತಾರೆ. ಆದರೆ ಜಮೀನು ಇಲ್ಲದೆ ಇರುವವರು ಎಲ್ಲಿ ಹೋಗಬೇಕು ಎಂದು ಕೋಪಗೊಂಡ ಜನರು ಪಂಚಾಯಿತಿ ಎದುರು ಆಗಮಿಸಿ ಟ್ರಾಕ್ಟರ್ನಲ್ಲಿ ಶವಸಂಸ್ಕಾರಕ್ಕೆ ಕಟ್ಟಿಗೆ ತಂದು ಹಾಕಿದರು.
ಹೋರಾಟ ಕೈಬಿಡುವಂತೆ ಪೊಲೀಸರು ಮನವಿ ಮಾಡಿದರೂ ಅಧಿಕಾರಿಗಳು ಬಂದು ಪರಿಹಾರ ನೀಡುವವರೆಗೂ ಗ್ರಾಮಸ್ಥರು ಕದಲಿಲ್ಲ. ನಂತರ ತಹಶೀಲ್ದಾರ ಜೆ.ಬಿ.ಮಜ್ಜಗಿ ಬಂದು ಸರ್ಕಾರದ ಜಮೀನು ಗುರುತಿಸಿ ಸ್ಮಶಾನಕ್ಕೆ ಉಪಯೋಗಿಸುವಂತೆ ಸೂಚನೆ ನೀಡಿದರು. ಈ ಸಮಯದಲ್ಲಿ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಜೀವಂತ ಕೋಳಿ ದಹನ: ಸ್ಮಶಾನ ಜಾಗ ಇಲ್ಲದ ಕಾರಣ ಪಂಚಾಯಿತಿ ಮುಂದೆಯೇ ಚಿತೆ ಸಿದ್ಧಪಡಿಸಿ ಕಾಳಪ್ಪ ಎಂಬುವವರನ್ನು ಸುಡಲು ಚಿಂತಿಸಿದ್ದರು. ಅದರಂತೆ ಶವವನ್ನು ಚಿತೆಗೆ ಏರಿಸಲಾಗಿತ್ತು. ಆದರೆ ಗ್ರಾಮದ ಹಿರಿಯರ ಸಲಹೆಯ ಮೇರೆಗೆ ಆ ಚಿತೆಯಲ್ಲಿ ಜೀವಂತ ಕೋಳಿಯನ್ನೇ ಸುಟ್ಟು ಪ್ರತಿಭಟನೆ ವ್ಯಕ್ತಪಡಿಸಿದರು.
ಇದನ್ನೂ ಓದಿ : ಸ್ಮಶಾನಕ್ಕೆ ತೆರಳಲು ಮಳೆ ಅಡ್ಡಿ.. ಗ್ರಾ ಪಂ ಕಚೇರಿ ಮುಂದೆ ಶವ ಹೂತ ಗ್ರಾಮಸ್ಥರು!