ಕಾರವಾರ: ಉದ್ಯಮಿ ಹಾಗೂ ಅವರ ಪತ್ನಿ ಮೇಲೆ ಐವರು ಅಪರಿಚಿತರು ತಲ್ವಾರ್ ಹಾಗೂ ಇತರೆ ಮಾರಕಾಸ್ತ್ರದಿಂದ ಮನಸೋಇಚ್ಛೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಹಣಕೋಣದಲ್ಲಿ ಇಂದು ಬೆಳಗ್ಗೆ ನಡೆದಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಉದ್ಯಮಿಯಾಗಿರುವ ಹಣಕೋಣ ಗ್ರಾಮದ ವಿನಾಯಕ ಎಂಬವರು ಹತ್ಯೆಯಾಗಿದ್ದಾರೆ. ಇವರ ಪತ್ನಿಗೆ ಗಂಭೀರ ಗಾಯಗಳಾಗಿದ್ದು, ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾತೇರಿ ಜಾತ್ರೆಗೆ ಉದ್ಯಮಿ ದಂಪತಿ ಬಂದಿದ್ದರು. ಇಂದು ಮರಳಿ ಪುಣೆಗೆ ಹೊರಡಲು ಸಿದ್ಧರಾಗಿದ್ದರು. ಈ ವೇಳೆ ಬೆಳಗ್ಗಿನ ಜಾವ 5.30ರ ಸುಮಾರಿಗೆ ಅಪರಿಚಿತರು ಮನೆಗೆ ನುಗ್ಗಿದ್ದಾರೆ. ಅಡುಗೆ ಮನೆಯಲ್ಲಿದ್ದ ವಿನಾಯಕ ಅವರಿಗೆ ಮನಬಂದಂತೆ ಚಾಕು ಹಾಗೂ ತಲ್ವಾರ್ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಹೆಂಡತಿ ಮೇಲೂ ದಾಳಿ ಮಾಡಿದ್ದು, ಅವರ ತಲೆ, ಕೈ ಸೇರಿದಂತೆ ಹಲವೆಡೆ ಗಂಭೀರ ಗಾಯಗಳಾಗಿವೆ.
ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮನೆಯಂಗಳದಲ್ಲಿ ಚಾಕು ಹಾಗೂ ರಾಡ್ ಸಿಕ್ಕಿದ್ದು, ಪೊಲೀಸ್ ತನಿಖೆಯ ಬಳಿಕವೇ ನಿಜಾಂಶ ಹೊರಬರಬೇಕಿದೆ.
ವರ್ಷದಲ್ಲಿ 7 ದಿನ ಮಾತ್ರ ಸಾತೇರಿ ದೇವಿಯ ದರ್ಶನ: ಹಣಕೋಣ ಗ್ರಾಮದ ಸಾತೇರಿ ದೇವಿ, ವರ್ಷಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಮಾತ್ರ 7 ದಿನ ಭಕ್ತರಿಗೆ ದರ್ಶನ ನೀಡುತ್ತಾಳೆ. ಇನ್ನುಳಿದ ದಿನಗಳಲ್ಲಿ ಈ ದೇವಾಲಯದ ಗರ್ಭಗುಡಿ ಮುಚ್ಚಿರುತ್ತದೆ.
ಇದನ್ನೂ ಓದಿ: ಕಾರವಾರದ ಈ ದೇಗುಲದಲ್ಲಿ ವರ್ಷಕ್ಕೆ 7 ದಿನ ಮಾತ್ರ ಭಕ್ತರಿಗೆ ದೇವಿಯ ದರ್ಶನ! - Sateri Devi Temple