ಬಾಗಲಕೋಟೆ: ಉಕ್ರೇನ್ನಲ್ಲಿರುವ ಕೆಲ ವಿದ್ಯಾರ್ಥಿಗಳು ಭಾರತಕ್ಕೆ ಬರಲಾಗದೆ ಪರದಾಡುತ್ತಿದ್ದಾರೆ. ಇವರಲ್ಲಿ ಜಿಲ್ಲೆಯ ಕೆರೂರು ಪಟ್ಟಣಕ್ಕೆ ಉಕ್ರೇನ್ನಿಂದ ಪ್ರಜ್ವಲ್ ಎಂಬ ವಿದ್ಯಾರ್ಥಿ ಆಗಮಿಸಿದ್ದಾರೆ.
ಉಕ್ರೇನ್ನಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವ ಪ್ರಜ್ವಲ್ ಘಟ್ಟದ ಉಕ್ರೇನ್ ನ್ಯಾಷನಲ್ ಮೆಡಿಕಲ್ ಕಾಲೇಜ್ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಜಿಲ್ಲೆಯ ಕೆಲ ವಿದ್ಯಾರ್ಥಿಗಳು ಸಹ ಸಿಲುಕಿಕೊಂಡು ತೊಂದರೆ ಅನುಭವಿಸುತ್ತಿದ್ದಾರೆ. ಉಕ್ರೇನ್ನಲ್ಲಿ ಈಗಿನ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ನಮ್ಮ ಸ್ನೇಹಿತರು ಸೇಫ್ ಆಗಿಲ್ಲ. ನಾನೇನೋ ಬಂದೆ, ಆದ್ರೆ ಇತರೆ ವಿದ್ಯಾರ್ಥಿಗಳಿಗೆ ತೊಂದರೆ ಇದೆ. ಖಾಕೀ೯ವ್, ಕೀವ್ನಲ್ಲಿ ಬಹಳ ತೊಂದರೆ ಇದೆ. ಅಲ್ಲಿ ಬಹಳಷ್ಟು ಜನ ಭಾರತೀಯರಿದ್ದಾರೆ. ನಮ್ಮ ಸರ್ಕಾರ ಆದಷ್ಟು ಬೇಗ ಅವರನ್ನ ಕರೆತರಬೇಕು ಎಂದು ಪ್ರಜ್ವಲ್ ಮನವಿ ಮಾಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆಮಾಡಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಸವದಿ, ಜಗದಾಳ ಗ್ರಾಮದ ಸಿಂಗಾಡಿ, ರಬಕವಿಯ ಗುರುವ ಹೀಗೆ ತಾಲೂಕಿನ ಹಲವಾರು ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ಕೆಲವರು ನೆರೆಯ ದೇಶಗಳಲ್ಲಿದ್ದರೆ, ಇನ್ನೂ ಕೆಲವರು ಉಕ್ರೇನ್ ಗಡಿಭಾಗಕ್ಕೂ ಬಂದಿಲ್ಲ. ಕೈಯಲ್ಲಿ ಜೀವ ಹಿಡಿದು ಬದುಕುತ್ತಿರುವ ನಮ್ಮ ಮಕ್ಕಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೇಗ ಕರೆಸಿಕೊಳ್ಳಬೇಕು ಎಂದು ಪಾಲಕರು ಕೈಮುಗಿದು ಕೇಳುತ್ತಿದ್ದಾರೆ.
ನಾವಲಗಿ ಗ್ರಾಮದ ಲಕ್ಷ್ಮಣ ಸವದಿ ದಂಪತಿ ತಮ್ಮ ಮಗನೊಂದಿಗೆ ಕ್ಷಣ ಕ್ಷಣಕ್ಕೂ ಮಾಹಿತಿ ಪಡೆದುಕೊಳ್ಳುತ್ತಾ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಜಗದಾಳ ಗ್ರಾಮದ ರವೀಂದ್ರ ಸಿಂಗಾಡಿ ದಂಪತಿಯೂ ಸಹ ಇದೇ ಪರಿಸ್ಥಿತಿಯಲ್ಲಿದ್ದಾರೆ.
ಒಂದೆಡೆ ಬಾಂಬ್ ಸ್ಫೋಟ, ಮತ್ತೊಂದೆಡೆ ಸಹಕಾರ: ಉಕ್ರೇನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ನಿಜಕ್ಕೂ ಕಷ್ಟಕರವಾಗಿದೆ. ಸುರಕ್ಷಿತ ಸ್ಥಳಕ್ಕೆ ಧಾವಿಸಿದೆವು ಎಂಬ ಕೊಂಚ ನಿರಾಳತೆ ಹೊಂದುವಷ್ಟರಲ್ಲಿಯೇ, ಬಾಂಬ್ ಸದ್ದಿಗೆ ವಾಸವಿರುವ ಕಟ್ಟಡಗಳು ಅಲುಗಾಡುತ್ತವೆ. ಕಳೆದೊಂದು ವಾರದಿಂದ ಬಾಂಬ್ ಸದ್ದಿಗೆ ಕಿವಿಗಳಲ್ಲಿ ಆ ಶಬ್ದವೇ ಗುಯ್ಗುಡುತ್ತಿವೆ ಎನ್ನುತ್ತಾರೆ ಅಲ್ಲಿನ ವಿದ್ಯಾರ್ಥಿಗಳು.
ಪ್ರಮುಖ ಪಟ್ಟಣಗಳಾದ ಕೀವ್ ಹಾಗೂ ಖಾರ್ಕೀವ್ ಪ್ರದೇಶಗಳಿಂದ ಸುಮಾರು 20 ರಿಂದ 25 ಕಿ.ಮೀನಷ್ಟು ದೂರದಲ್ಲಿ, ರಾಜ್ಯದ 150ಕ್ಕೂ ಅಧಿಕ ಜನರು ಫಿಸೋಚಿ ಎಂಬ ಸ್ಥಳದಲ್ಲಿದ್ದಾರೆ. ಇದು ರಷ್ಯಾ ದೇಶದ ಸುಮಾರು 10-12 ಕಿ.ಮೀನಷ್ಟು ದೂರವಿರುವ ಪ್ರದೇಶವಾಗಿದೆ.
ಹಸಿವು ತಾಳಲಾಗುತ್ತಿಲ್ಲ: ಅಲ್ಲಿ ಬಿಸಿ ನೀರು ಮಾತ್ರ ದೊರಕುತ್ತಿದೆ. ಕೆಲ ಸಂದರ್ಭದಲ್ಲಿ ಚಾಕಲೇಟ್, ಬಿಸ್ಕೇಟ್ ಸಿಕ್ಕರೂ ಹಸಿವು ನೀಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಜನರು ಹಾಗೂ ಮಿಲಿಟರಿ ಜನ ಅಲ್ಲಲ್ಲಿ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಸುಮಾರು ಕಿ.ಮೀನಷ್ಟು ದೂರ ಕ್ರಮಿಸಿ ರೈಲು ಹತ್ತಬೇಕಾಗಿದೆ. ಸುಮಾರು 25-30 ಕಿ.ಮೀನಷ್ಟು ದೂರ ಬಂದಿದ್ದೇವೆ. ಆದರೂ ಬಾಂಬ್ ಸುರಿಮಳೆಯ ಅಬ್ಬರ ಮಾತ್ರ ನಮ್ಮ ಹಿಂದೆಯೇ ಇದೆ ಎಂದು ಅಲ್ಲಿರುವ ವಿದ್ಯಾರ್ಥಿಗಳು ಹೇಳುತ್ತಾರೆ.
ಇದನ್ನೂ ಓದಿ: ಉಕ್ರೇನ್ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ 130 ಬಸ್ ಸೇವೆ ಕಲ್ಪಿಸಿದ ರಷ್ಯಾ