ಬಾಗಲಕೋಟೆ: ಗರ್ಭಿಣಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ನೀಡುವ ಆಹಾರ ಧಾನ್ಯವನ್ನು ಸರಿಯಾಗಿ ವಿತರಣೆ ಮಾಡದೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಹುನಗುಂದ ತಾಲೂಕಿನ ಕರಡಿ ಗ್ರಾಮಸ್ಥರು, ಅಂಗನವಾಡಿ ಕೇಂದ್ರದ ಮಹಿಳಾ ಮುಖ್ಯಸ್ಥರಿಗೆ ತರಾಟೆಗೆ ತೆಗೆದುಕೊಂಡಿರುವ ಘಟನೆ ಜರುಗಿತು.
ಲಾಕ್ಡೌನ್ ನೆಪದಲ್ಲಿ ಕಳೆದ ಎರಡು ತಿಂಗಳನಿಂದ ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ನೀಡಬೇಕಾದ ಪೌಷ್ಟಿಕ ಆಹಾರ ಧಾನ್ಯ ವಿತರಣೆ ಮಾಡಿಲ್ಲ. ಕೆಲವೊಂದು ಸಾಮಗ್ರಿಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಅಂಗನವಾಡಿ ಕಾರ್ಯಕರ್ತೆ ಪುಷ್ಪಾ ಪಾದನಕಟ್ಟಿ ಎಂಬುವವರು ಕೊರೊನಾ ಹಿನ್ನೆಲೆ ಮನೆಗೆ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಎರಡು ತಿಂಗಳನಿಂದ ಆಹಾರ ಸಾಮಗ್ರಿಗಳಿಗೆ ಹುಳು ಬಿದ್ದು ಹಾಳಾಗಿವೆ. ಮೊಟ್ಟೆ ಇದ್ದರೂ ವಿತರಣೆ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಪುಷ್ಪ ಪಾದನಕಟ್ಟಿ ಮಾತನಾಡಿ, ಆಹಾರ ಧಾನ್ಯ ಬಂದಾಗನಿಂದಲೂ ಹಾಳಾಗಿದೆ. ಇದರಲ್ಲಿಯೇ ಗುಣಮಟ್ಟ ಇದ್ದ ಆಹಾರ ಧಾನ್ಯ ವಿತರಣೆ ಮಾಡಲಾಗಿದೆ. ರಾತ್ರಿ ಅಂಗನವಾಡಿ ತೆರೆದಿದ್ದರೂ ಲಾರಿ ಮೂಲಕ ಬಂದ ಆಹಾರ ಸಾಮಗ್ರಿ ಇಳಿಸುವ ಕಾರ್ಯ ನಡೆದಿತ್ತು ಎಂದರು.
ನೀವು ಕಳ್ಳಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.