ಬಾಗಲಕೋಟೆ: ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರು ಹಾಗೂ ಗವರ್ನರ್ ಆಯ್ಕೆ ಹಿನ್ನೆಲೆಯಲ್ಲಿ ಕೈ ಕಾಲು ಇಲ್ಲದವರಿಗೆ ಉಚಿತ ಕೈಕಾಲು ಜೋಡಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ಕಾಳಿದಾಸ ಮಹಾವಿದ್ಯಾಲಯದಲ್ಲಿ ಸ್ಥಳೀಯ ರೋಟರಿ ಸಂಸ್ಥೆ ಹಾಗೂ ಮಹಾರಾಷ್ಟ್ರದ ಇಚಲಕರಂಜಿ ಪಟ್ಟಣದ ರೋಟರಿ ಸಂಸ್ಥೆ ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾಲು- ಕೈ ಇಲ್ಲದ ವಿಶೇಷಚೇತನರಿಗೆ ಉಚಿತ ಕೃತಕ ಕೈ, ಕಾಲು ಜೋಡಣೆ ಮಾಡಲಾಗುತ್ತದೆ. ಜುಲೈ 7 ರಂದು ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರು ಹಾಗೂ ಗವರ್ನರ್ ಆಯ್ಕೆ ಹಿನ್ನೆಲೆ ಇಂತಹ ಉಚಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರಾದ ಸತೀಶ ಬೇತಾಳ ತಿಳಿಸಿದ್ದಾರೆ.
ಬಾಗಲಕೋಟೆ, ವಿಜಯಪುರ, ರಾಯಚೂರು, ಕೊಪ್ಪಳ ಹಾಗೂ ಗದಗ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಿಶೇಷಚೇತನರು ಇಲ್ಲಿಗೆ ಬಂದಿದ್ದರು. ಸುಮಾರು 200ಕ್ಕೂ ಅಧಿಕ ಜನರು ಈ ಉಚಿತ ಚಿಕಿತ್ಸೆಯಲ್ಲಿ ಭಾಗವಹಿಸಿದ್ದು, ಎಲ್ಲರಿಗೂ ಕೃತಕ ಕೈ, ಕಾಲು ಜೋಡಣೆಗೆ ಪ್ರಥಮ ಚಿಕಿತ್ಸೆ ಹಾಗೂ ಮಾಹಿತಿಯನ್ನು ನೀಡಲಾಯಿತು. ಜುಲೈ 7 ರಂದು ಎಲ್ಲರಿಗೂ ಉಚಿತ ಹಾಗೂ ಕೃತಕವಾಗಿ ಕೈ- ಕಾಲು ನೀಡಿ ಜೋಡಣೆ ಮಾಡಲು ರೋಟರಿ ಸಂಸ್ಥೆಯವರು ನಿರ್ಧಾರ ಮಾಡಿದ್ದಾರೆ. ಇದರಿಂದ ಹೆಚ್ಚು ಉಪಯೋಗ ಹಾಗೂ ಅನುಕೂಲವಾಗಲಿದೆ ಎಂದು ಉಚಿತ ಚಿಕಿತ್ಸೆ ಪಡೆಯಲು ಆಗಮಿಸಿದ ರಾಜೇಶ್ವರಿ ತಿಳಿಸಿದ್ದಾರೆ.