ಬಾಗಲಕೋಟೆ: ಶುಚಿ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ನ್ಯಾಪ್ಕಿನ್ಗಳನ್ನು ಹಂಚಿಕೆ ಮಾಡುವಲ್ಲಿ ಕರ್ತವ್ಯ ಲೋಪ ಎಸಗಿದ ಜಿಲ್ಲಾ ಆರ್.ಸಿ.ಎಚ್, ಶುಚಿ ಕಾರ್ಯಕ್ರಮದ ನೋಡಲ್ಅಧಿಕಾರಿ ಡಾ.ಬಿ.ಜಿ.ಹುಬ್ಬಳ್ಳಿ ಅವರಿಗೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ನೋಟಿಸ್ ಜಾರಿ ಮಾಡಿದ್ದಾರೆ.
ಇತ್ತೀಚೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಂದರ್ಭ, ಹೆಣ್ಣು ಮಕ್ಕಳಿಗೆ ನ್ಯಾಪಕಿನ್ಗಳನ್ನು ವಿತರಣೆ ಮಾಡದಿರುವುದು ಕಂಡುಬಂದಿತು. ಜನವರಿಯಲ್ಲಿ 4 ಲಕ್ಷ ನ್ಯಾಪಕಿನ್ಗಳು ಇದ್ದರು ಸಹ ಕೋವಿಡ್ ಸಮಯದಲ್ಲಿ ವಿತರಿಸದೇ ಇಲಾಖೆ ಕಚೇರಿಯ ನೆಲದ ಮೇಲೆ ಇಟ್ಟಿರುವದನ್ನು ಕಂಡು ಅತೃಪ್ತಿ ವ್ಯಕ್ತಪಡಿಸಿದರು. ಕಣ್ಣಿನ ದೋಷ ಇದ್ದವರಿಗೆ ಕನ್ನಡಕ, ಅಂಗವಿಕಲರಿಗೆ ವಾಹನ ವಿತರಿಸದೇ ಕಚೇರಿಯಲ್ಲಿಯೇ ದಾಸ್ತಾನು ಮಾಡಿ ತಮ್ಮ ಗಮನಕ್ಕೆ ತರದಿರುವುದು ತಿಳಿದುಬಂದಿತು.
ಕಳೆದ 2019-20ನೇ ಸಾಲಿನಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ನೀಡಲು ಬಂದಿದ್ದ ಆರೋಗ್ಯ ಕಿಟ್, ಅಂಗವಿಕಲರಿಗೆ ಊರುಗೋಲು, ಟ್ರೈಸೈಕಲ್ ಹಾಗೂ ದಿನದ 24 ಗಂಟೆಗಳ ಆಸ್ಪತ್ರೆಗಳಿಗೆ ಅಗತ್ಯವಿರುವ ಡಸ್ಟ್ ಬಿನ್ಗಳು ಸಹ ಕಚೇರಿಯಲ್ಲಿ ಇರುವುದು ಕಂಡುಬಂದಿತು. ಮಹಿಳೆಯರು ಹಾಗೂ ಹದಿಹರೆಯದ ಹೆಣ್ಣುಮಕ್ಕಳು ಋತು ಕಾಲದ ಸಮಯದಲ್ಲಿ ಉತ್ತಮ ಶುಚಿತ್ವ ಹಾಗೂ ಆರೋಗ್ಯ ಕಾಪಾಡುವ ದಿಸೆಯಲ್ಲಿ ಜಿಲ್ಲಾ ಮಟ್ಟದಲ್ಲಿ ರಚಿಸಲಾದ ಸಮಿತಿ ಇದ್ದರು ಸಮಿತಿಯ ಗಮನಕ್ಕೆ ತರದೇ ಇರುವುದು. ಕಳೆದೆರಡು ವರ್ಷಗಳಲ್ಲಿ ಶುಚಿ ಯೋಜನೆಯಡಿ 3 ಲಕ್ಷಕ್ಕೂ ಮೇಲ್ಪಟ್ಟು ನ್ಯಾಪಕಿನ್ಗಳು ಇದ್ದರೂ ವಿತರಸದೇ ಇರುವುದು ಪರಿಶೀಲನೆ ವೇಳೆಯಲ್ಲಿ ತಿಳಿದು ಬಂದಿರುವುದಾಗಿ ತಿಳಿಸಿದರು.