ಬಾಗಲಕೋಟೆ: ಗ್ರಾಮೀಣ ಭಾಗದ ಮಕ್ಕಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಐತಿಹಾಸಿಕ ಸ್ಥಳಗಳನ್ನು ನೋಡುವ ಭಾಗ್ಯ ಕಲ್ಪಿಸುವ ಸಂಕಲ್ಪವನ್ನು ಜಿಪಂ ಸಿಇಒ ಗಂಗೂಬಾಯಿ ಮಾನಕರ ಮಾಡಿದ್ದಾರೆ.
ತಾಲೂಕಿನ ಶೀಗಿಕೇರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಈ ವಿಷಯ ತಿಳಿಸಿದ ಅವರು, ವಿದ್ಯಾರ್ಥಿಗಳಲ್ಲಿ ಕ್ರೀಡೆ, ಪಠ್ಯೇತರ ವಿಷಯಗಳನ್ನು ಒಳಗೊಂಡಂತೆ ಪ್ರವಾಸಗಳ ಅನುಭವಗಳನ್ನು ಪಡೆಯುವಂತಾಗಲು ಗತಕಾಲದ ವೈಭವ ಸಾರುವ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗೆ ಶೀಗಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಒಂದು ದಿನದ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು.
ಮಕ್ಕಳ ಬೇಡಿಕೆಗೆ ಅನುಗುಣವಾಗಿ ಅವರ ಆಶೆ ಆಕಾಂಕ್ಷೆಗಳನ್ನು ತಿಳಿದುಕೊಂಡು ರಜಾ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಬಾಲಭವನ ಯೋಜನೆಯಡಿ ಬೇಸಿಗೆ ಶಿಬಿರಗಳನ್ನು ಹಮ್ಮಿಕೊಂಡಿದ್ದು, ಈ ಶಿಬಿರದಲ್ಲಿ ಡ್ರಾಯಿಂಗ್, ಮೆಹಂದಿ, ಯೋಗ, ಕರಾಟೆ, ವಿಜ್ಞಾನ, ಸಮೂಹ ನೃತ್ಯ, ಹೊರಾಂಗಣ ಮತ್ತು ಒಳಾಂಗಣ ಆಟಗಳ ಜೊತೆಗೆ ಒಂದು ದಿನದ ಪ್ರವಾಸ ಸಹ ಹಮ್ಮಿಕೊಳ್ಳುವುದಾಗಿ ಮಾನಕರ ತಿಳಿಸಿದರು.