ಬಾಗಲಕೋಟೆ: ಜನವರಿ 11ರಿಂದ 14ರವರೆಗೆ ಕೂಡಲಸಂಗಮದಲ್ಲಿ 33ನೇ ಶರಣ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಯೋಗ ಗುರು ಬಾಬಾ ರಾಮದೇವ್ ಸೇರಿದಂತೆ ಹಲವು ರಾಜಕೀಯ ಮುಖಂಡರು, ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ಬಸವ ಪೀಠದ ಪೀಠಾಧ್ಯಕ್ಷೆ ಡಾ. ಮಾತೆ ಗಂಗಾದೇವಿ ತಿಳಿಸಿದ್ದಾರೆ.
ಬಾಗಲಕೋಟೆಯ ನವನಗರದ ಪ್ರೆಸ್ ಕಬ್ಲ್ನಲ್ಲಿ ಮಾತನಾಡಿದ ಅವರು, ಜನವರಿ 11ರಂದು ಚಿಂತನಗೋಷ್ಠಿ ನಡೆಯಲಿದ್ದು, ಹುಬ್ಬಳ್ಳಿಯ ರಾಜೇಂದ್ರ ಮಹಾಸ್ವಾಮಿಗಳು ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ ರಾಷ್ಟ್ರೀಯ ಬಸವ ದಳದ 29ನೇ ಅಧಿವೇಶನ ಹಿನ್ನೆಲೆ ಬಸವಾದಿ ಶರಣರ ಮಹಿಳಾ ಕ್ರಾಂತಿ ವಿಷಯದ ಮೇಲೆ ಗೋಷ್ಠಿ ನಡೆಯಲಿದೆ.
12ರಂದು ಕ್ರಾಂತಿಯೋಗಿಣಿ ಡಾ. ಮಾತೆ ಮಹಾದೇವಿಯವರ ಮಹಾತ್ಯಾಗ ಸಮಾರಂಭ ನಡೆಯಲಿದ್ದು, ಧ್ವಜಾರೋಹಣವನ್ನು ಸಚಿವರಾದ ಸಿ.ಟಿ.ರವಿ ನೆರವೇರಿಸಲಿದ್ದಾರೆ. ಮಾಜಿ ಸಚಿವ ಎಂ.ಬಿ.ಪಾಟೀಲ್, ಕಿಮ್ಮನೆ ರತ್ನಾಕರ್ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ 6 ಗಂಟೆಗೆ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರೈತ ಸಮಾವೇಶ ನಡೆಯಲಿದ್ದು, ಎಸ್.ಆರ್.ಪಾಟೀಲ್, ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ ಸೇರಿದಂತೆ ಇತರ ರೈತ ಮುಖಂಡರು, ಸಾಮಾಜಿಕ ಚಿಂತಕರು ಭಾಗವಹಿಸಲಿದ್ದಾರೆ ಎಂದರು.
ಇನ್ನು 13ರಂದು ಶರಣ ಮೇಳದ ಪ್ರಮುಖ ಉದ್ಘಾಟನಾ ಸಮಾರಂಭ ಯೋಗ ಗುರು ಬಾಬಾ ರಾಮದೇವ್ ಅವರ ಸಾನ್ನಿಧ್ಯದಲ್ಲಿ ಜರುಗಲಿದ್ದು, ಉದ್ಘಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಲಿದ್ದಾರೆ. ಧ್ವಜಾರೋಹಣವನ್ನು ಡಿಸಿಎಂ ಗೋವಿಂದ ಕಾರಜೋಳ ನೆರವೇರಿಸದರೆ, ವಚನಾಮೃತ ಪುಸ್ತಕ ಬಿಡುಗಡೆಯನ್ನು ಸಚಿವರಾದ ಪ್ರಭು ಚೌಹಾಣ್ ಮಾಡಲಿದ್ದಾರೆ.
ಇನ್ನು ವಿಶ್ವದ ಪ್ರಪ್ರಥಮ ಮಹಿಳಾ ಜಗದ್ಗುರು ಡಾ. ಮಾತೆ ಮಹಾದೇವಿಯವರ ಸ್ಮರಣಾರ್ಥ ರಾಷ್ಟ್ರಮಟ್ಟದ ಪ್ರಥಮ ಬಸವಾತ್ಮಜೆ ಪ್ರಶಸ್ತಿಯನ್ನು ಡಾ. ಬಿ.ಟಿ.ಲಲಿತಾ ನಾಯಕ್ಗೆ ನೀಡಲಿದ್ದು, ಶರಣ ಕಾಯಕ ರತ್ನ ಪ್ರಶಸ್ತಿಯನ್ನು ಎನ್.ಪುಟ್ಟರುದ್ರ ಹಾಗೂ ಕಾಶಪ್ಪ ಧನ್ನೂರ ಹಾಗೂ ಶರಣ ಕ್ರೀಡಾ ರತ್ನವನ್ನು ಹಿರಿಯ ನ್ಯಾಯಾವಾದಿ, ರಾಷ್ಟ್ರೀಯ ಕ್ರೀಡಾಪಟು ಶರಣ ಜೆ.ಜೈರಾಜ ಇವರಿಗೆ ನೀಡಲಾಗ್ತಿದೆ.
14ರಂದು ಬಸವ ಕ್ರಾಂತಿ ಸಮಾರೋಪ ಸಮಾರಂಭ ನಡೆಯಲಿದ್ದು, ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ಬೃಹತ್ ಸ್ತಬ್ಧಚಿತ್ರದ ಮೆರವಣಿಗೆ ನಡೆಸಲಾಗುತ್ತದೆ ಎಂದು ಡಾ. ಗಂಗಾಮಾತೆ ತಿಳಿಸಿದರು.