ಬಾಗಲಕೋಟೆ: ಮಳೆ, ಪ್ರವಾಹದಿಂದ ರಾಜ್ಯದಲ್ಲಿ 25 ಸಾವಿರ ರೂ. ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಪ್ರಾಥಮಿಕ ವರದಿ ನೀಡಿದ್ದೇವೆ. ಕೇಂದ್ರ ಸರ್ಕಾರದಿಂದ ನೆರವು ಸಿಗಬೇಕಾಗಿದೆ, ಸಿಗುತ್ತೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರು, ಕೇಂದ್ರ ಸರ್ಕಾರ ಎನ್ಡಿಆರ್ಎಫ್, ಎಸ್ಡಿಆರ್ಎಫ್ ನಿಯಮಗಳ ಪ್ರಕಾರ ಹಣ ಬಿಡುಗಡೆ ಮಾಡುತ್ತೆ. ಅಷ್ಟೂ ಹಣವನ್ನು ಕೇಂದ್ರ ಸರ್ಕಾರ ನಿಯಮಾವಳಿ ಪ್ರಕಾರ ಕೊಡುತ್ತದೆ ಎಂದರು.
ಕೋವಿಡ್ ಲಸಿಕೆಗೆ ಕೇಂದ್ರ ಸರ್ಕಾರದ ಸಿದ್ಧತೆ ವಿಚಾರವಾಗಿ ಮಾತನಾಡಿದ ಅವರು, ಜನವರಿ ಸಮಯಕ್ಕೆ ಕೋವಿಡ್ ವ್ಯಾಕ್ಸಿನ್ ಬರುವ ನಿರೀಕ್ಷೆ ಇದೆ. ಪ್ರತಿಯೊಬ್ಬರಿಗೂ ಮುಟ್ಟಿಸುವ ಕಾರ್ಯ ಕೇಂದ್ರ ಸರ್ಕಾರ ಮಾಡುತ್ತದೆ ಎಂದರು.
ಪಟಾಕಿ ನಿಷೇಧ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಪಟಾಕಿ ಸಿಡಿಸುವುದರಿಂದ ಕೋವಿಡ್ ರೋಗಿಗಳಿಗೆ, ಗುಣಮುಖ ಆದವ್ರಿಗೆ ತೊಂದರೆ ಆಗುತ್ತದೆ. ಪಟಾಕಿಯಲ್ಲಿ ವಿಷ ಅನಿಲ ಇರುತ್ತೆ ಅನ್ನೋ ತಜ್ಞರ ವರದಿ ಇದೆ. ಹಾಗಾಗಿ ಪಟಾಕಿ ಹಾರಿಸುವುದನ್ನು ಈ ವರ್ಷ ಬ್ಯಾನ್ ಮಾಡಲಾಗಿದೆ. ಜನ ಇದಕ್ಕೆ ಸಹಕರಿಸಬೇಕು. ಸಣ್ಣಪುಟ್ಟ ಹಸಿರು ಪಟಾಕಿ ಅಂತ ಹೇಳಿದ್ದಾರೆ, ಅದು ಯಾವ ರೀತಿ ಉಪಯೋಗ ಆಗುತ್ತೆ ನೋಡೋಣ ಎಂದರು.
ಮಹಿಳೆ ಜೊತೆ ಸಿದ್ದು ಸವದಿ ದುರ್ವರ್ತನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಿದ್ದು ಸವದಿ ಅದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ನಾನೇನು ಎಳೆದಾಡಿಲ್ಲ, ಅಲ್ಲಿ ಗಲಾಟೆ ಆಗಬಾರದು ಅಂತ ರಕ್ಷಣೆಗೆ ಹೋಗಿದ್ದಾಗಿ ಹೇಳಿಕೆ ಕೊಟ್ಟಿದ್ದಾರೆ ಎಂದರು.
ಚುನಾವಣೆ ಬಳಿಕ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ಪಾರ್ಟಿ ವಕ್ತಾರರನ್ನಾಗಿ ಸಿದ್ದರಾಮಯ್ಯ ಅವ್ರನ್ನ ನಾವೇನು ನೇಮಿಸಿಕೊಂಡಿಲ್ವಲ್ಲ ಎಂದು ಚಟಾಕಿ ಹಾರಿಸಿದರು.
ರವಿ ಬೆಳಗೆರೆ ನಿಧನಕ್ಕೆ ಸಂತಾಪ
ರವಿ ಬೆಳಗೆರೆ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಪತ್ರಿಕೋದ್ಯಮದಲ್ಲಿ ನಿರ್ಭಯವಾಗಿ, ನಿಷ್ಪಕ್ಷವಾಗಿ ನಡೆದುಕೊಂಡಿದ್ದಾರೆ. ರವಿ ಬೆಳಗೆರೆ ಲೇಖನ ಪ್ರತಿಯೊಬ್ಬರೂ ಓದಲೇಬೇಕು ಅಂತನಿಸುತ್ತದೆ. ಹಾಗಾಗಿ ಬೀಚಿಯವ್ರ ಬಳಿಕ ರವಿ ಬೆಳಗೆರೆಯವ್ರನ್ನ ನೋಡಿದ್ದು. ರವಿ ಬೆಳಗೆರೆ ಅಗಲಿಕೆ ನಮಗೆ ನೋವಾಗಿದೆ. ಪತ್ರಿಕೋದ್ಯಮ, ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಆಗಿದೆ. ರವಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದರು.