ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ 'ಎಂಎಸ್ಡಿ ಕ್ರಿಕೆಟ್ ಅಕಾಡೆಮಿ' ನಗರದಲ್ಲಿ ಪ್ರಾರಂಭವಾಗಿದೆ. ಗೇಮ್ ಪ್ಲೇ ಮತ್ತು ಆರ್ಕಾ ಸ್ಪೋರ್ಟ್ಸ್ ಜೊತೆಗೆ ಸಹಯೋಗದಲ್ಲಿ ಈ ಅಕಾಡೆಮಿ ಕಾರ್ಯ ನಿರ್ವಹಿಸಲಿದೆ. ಅತ್ಯಾಧುನಿಕ ಮೂಲಸೌಕರ್ಯ ಮತ್ತು ವಿಶ್ವ ದರ್ಜೆಯ ತರಬೇತಿ ಸೌಲಭ್ಯಗಳು ಇಲ್ಲಿರಲಿದೆ.
ಎಂ.ಎಸ್.ಡಿ.ಸಿ.ಎಯಲ್ಲಿ ತರಬೇತಿ ಪಡೆಯುವವರಿಗೆ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.
ಅಕಾಡೆಮಿಯ ಭಾಗವಾಗಲು ಸಿದ್ಧರಾಗಿ ಎಂದ ಮಾಹಿ:
ಈ ಸಂದರ್ಭದಲ್ಲಿ ವಿಡಿಯೋ ಸಂದೇಶದ ಮೂಲಕ ಮಾತನಾಡಿರುವ ಧೋನಿ ಸಿಲಿಕಾನ್ ಸಿಟಿಯಲ್ಲಿ ಅಕಾಡೆಮಿ ಪ್ರಾರಂಭಿಸಲು ತುಂಬಾ ಉತ್ಸುಕನಾಗಿದ್ದೇನೆ. ಧೋನಿ ಕ್ರಿಕೆಟ್ ಅಕಾಡೆಮಿ ನಿಮ್ಮ ಕೌಶಲ್ಯಗಳನ್ನು ಚುರುಕುಗೊಳಿಸಲು ಉತ್ತಮ ತಂತ್ರಜ್ಞಾನದ ಸಹಾಯದಿಂದ 360 ಡಿಗ್ರಿ ತರಬೇತಿ ವಿಧಾನವನ್ನು ಒದಗಿಸುತ್ತದೆ.
ನಾವು ಅರ್ಹ ತರಬೇತುದಾರರು ಮತ್ತು ಫಿಟ್ನೆಸ್ ತಜ್ಞರನ್ನು ಕರೆತರುತ್ತೇವೆ. ಈಗಲೇ ನೋಂದಾಯಿಸಿ ಮತ್ತು ನನ್ನ ಅಕಾಡೆಮಿಯ ಭಾಗವಾಗಲು ಸಿದ್ಧರಾಗಿ. ಇದು ಕೇವಲ ಕ್ರಿಕೆಟರ್ ಆಗಲು ಅಷ್ಟೇ ಅಲ್ಲ. ಮಾನಸಿಕ ಮತ್ತು ದೈಹಿಕ ಕೌಶಲ್ಯಗಳನ್ನು ಕಲಿಯಲು ಧೋನಿ ಕ್ರಿಕೆಟ್ ಅಕಾಡೆಮಿಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಬಹುದು ಎಂದು ತಿಳಿಸಿದರು.
ಮಾಹಿ ನೀಡಿದ ಸಲಹೆ ಏನು?
ಮುಂದುವರೆದು ಮಾತನಾಡಿದ ಎಂ. ಎಸ್ ಧೋನಿ, ನನ್ನ ಒಂದೇ ಒಂದು ಸಲಹೆ ಎಂದರೆ, ಫಲಿತಾಂಶಕ್ಕಿಂತ ಹೆಚ್ಚು ಪ್ರಕ್ರಿಯೆ ಮುಖ್ಯವಾದುದು. ಫಲಿತಾಂಶವು ನಮ್ಮ ಪ್ರಕ್ರಿಯೆಯ ಫಲ ಅಷ್ಟೇ. ಆದರೆ, ಇಂದಿನ ಜಗತ್ತಿನಲ್ಲಿ ನಾವು ಪ್ರಕ್ರಿಯೆಗಿಂತ ಹೆಚ್ಚಾಗಿ ಫಲಿತಾಂಶದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದೇವೆ. ಆದ್ದರಿಂದ, ಪ್ರಕ್ರಿಯೆಯ ಮೇಲೆ ಗಮನ ಕೊಡಿ. ಎಲ್ಲಾ ಸಣ್ಣ ವಿಷಯಗಳನ್ನು ನೋಡಿಕೊಳ್ಳಿ ಮತ್ತು ಇದರಿಂದ ಅಂತಿಮವಾಗಿ ನೀವು ಬಯಸಿದ ಫಲಿತಾಂಶವನ್ನು ಪಡೆಯುತ್ತೀರಿ.
ನಾವು ಇನ್ನೂ ಹೆಚ್ಚಿನದನ್ನು ಪಡೆಯಬೇಕಾಗಿತ್ತು ಎಂದು ದೂರುತ್ತಲೇ ಇರುತ್ತೇವೆ. ಆದರೆ ವಾಸ್ತವವಾಗಿ, ನಾವು ಏನು ಮಾಡಿದ್ದೇವೆ ಎಂಬುದರ ಫಲವೇ ನಮಗೆ ಸಿಗುವ ಫಲಿತಾಂಶವಾಗಿರುತ್ತದೆ. ಆದ್ದರಿಂದ, ನಾವು ಚೆನ್ನಾಗಿ ತಯಾರಾದರೆ, ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು. ನಾವು ನಮಗೇ ಪ್ರಾಮಾಣಿಕರಾಗಿದ್ದರೆ, ನಾವು ಬಯಸಿದ ಫಲಿತಾಂಶವನ್ನು ಪಡೆಯುತ್ತೇವೆ. ಒಂದು ವೇಳೆ ಅಲ್ಲಿ ಯಾವುದೇ ನ್ಯೂನತೆಯಿದ್ದರೆ, ಅದು ನಮ್ಮ ಮುಂದಿನ ಕಲಿಕೆಯಾಗಿರುತ್ತದೆ ಎಂದು ಎಂ.ಎಸ್. ಧೋನಿ ಹೇಳಿದರು.
ಎಲ್ಲಾ ಕ್ರಿಕೆಟಿಗರಿಗೂ ಮಹತ್ವದ ದಿನ:
ಈ ಸಂದರ್ಭದಲ್ಲಿ ಮಾತನಾಡಿದ ಗೇಮ್ ಪ್ಲೇ ಮಾಲೀಕ ದೀಪಕ್ ಎಸ್. ಭಟ್ನಾಗರ್, ಗೇಮ್ಪ್ಲೇ ಗೆ ಮಾತ್ರವಲ್ಲದೇ ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಎಲ್ಲ ಕ್ರಿಕೆಟಿಗರಿಗೂ ಇಂದು ಮಹತ್ವದ ದಿನವಾಗಿದೆ. ಬೆಂಗಳೂರಿನಲ್ಲಿ ಆರಂಭಗೊಂಡ ಎಂ ಎಸ್ ಧೋನಿ ಕ್ರಿಕೆಟ್ ಅಕಾಡೆಮಿ, ಕ್ರಿಕೆಟ್ನಲ್ಲಿ ದೊಡ್ಡ ಸಾಧನೆ ಮಾಡಲು ಬಯಸುವ ಮಕ್ಕಳು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಅತ್ಯುತ್ತಮ ಮೂಲಸೌಕರ್ಯ ಮತ್ತು ವಿಶ್ವ ದರ್ಜೆಯ ತರಬೇತಿ ಸೌಲಭ್ಯಗಳನ್ನು ಹೊಂದಿದೆ ಎಂದು ತಿಳಿಸಿದರು.
ಸ್ವತಃ ಮಹೇಂದ್ರ ಸಿಂಗ್ ಧೋನಿ ಅಕಾಡೆಮಿಯ ಮಾರ್ಗದರ್ಶಕರಾಗಿರುವುದರಿಂದ, ಬೆಂಗಳೂರಿನ ಎಲ್ಲ ಯುವಜನರಿಗೆ ಕ್ರಿಕೆಟ್ ಮಾಂತ್ರಿಕನಿಂದ ಕಲಿಯಲು ಸಾಧ್ಯ. ಜೊತೆಗೆ ಮೀಸಲಾದ ಅರ್ಹ ತರಬೇತುದಾರರ ತಂಡದಿಂದಲೂ ಕೂಡ ಕಲಿಯಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ನಾವು ಎಂಎಎಸ್ಡಿಸಿಎ ಅನ್ನು ಬೆಂಗಳೂರು ಆರಂಭಿಸುವುದರ ಮೂಲಕ ಭಾರತೀಯ ಕ್ರಿಕೆಟ್ ಬೆಳೆಯಲು ಕೊಡುಗೆ ನೀಡಲು ಬಯಸುತ್ತೇವೆ ಎಂದು ದೀಪಕ್ ಎಸ್. ಭಟ್ನಾಗರ್ ಹೇಳಿದರು.
ಯುವ ಕ್ರಿಕೆಟಿಗರಿಗೆ ಸಂಭ್ರಮದ ದಿನ:
ಬೆಂಗಳೂರಿನಲ್ಲಿ ಯುವ ಕ್ರಿಕೆಟಿಗರಿಗೆ ಬಹಳ ಸಂಭ್ರಮದ ದಿನವಿದು. ಈಗ, ಶ್ರೇಷ್ಠ ಕ್ರಿಕೆಟಿಗ, ಮಹೇಂದ್ರ ಸಿಂಗ್ ಧೋನಿಯ ಮಾರ್ಗದರ್ಶನದ ಜೊತೆಗೆ ಅತ್ಯುತ್ತಮ ತರಬೇತುದಾರರಿಂದ ಕ್ರಿಕೆಟ್ ಕಲಿಯಬಹುದು. ಬೆಂಗಳೂರಿನಲ್ಲಿರುವ ಎಲ್ಲ ಪೋಷಕರು ತಮ್ಮ ಮಕ್ಕಳನ್ನು ನಮ್ಮ ಅಕಾಡೆಮಿಗೆ ಕರೆತರಲು ನಾನು ಈ ಮೂಲಕ ಆಹ್ವಾನಿಸುತ್ತೇನೆ” ಎಂದು ಎಂ.ಎಸ್. ಧೋನಿ ಕ್ರಿಕೆಟ್ ಅಕಾಡೆಮಿ ಬೆಂಗಳೂರಿನ ಸಂಯೋಜಕರಾಗಿರುವ ಅಕಾಡೆಮಿಯ ನಿರ್ವಾಹಕರ ಎಂ. ವಿಶ್ವನಾಥ್ ತಿಳಿಸಿದರು.
ಒಬ್ಬ ಯಶಸ್ವಿ ಕ್ರಿಕೆಟಿಗನಾಗಲು, ಆತ ಆತ್ಮವಿಶ್ವಾಸದಿಂದಿರಬೇಕು, ಒತ್ತಡದಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ವಿವಿಧ ಪರಿಸರಗಳಿಗೆ ಹೊಂದಿಕೊಳ್ಳಬೇಕು ಎಂಬ ನಂಬಿಕೆಯೊಂದಿಗೆ ಎಂಎಎಸ್ಡಿಸಿಎ ಕಾರ್ಯನಿರ್ವಹಿಸುತ್ತದೆ.
ಕ್ರಿಕೆಟ್ ತಂತ್ರಗಳು ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಆಟದ ಅರ್ಥ ಮತ್ತು ಅಂತಃಪ್ರಜ್ಞೆಯನ್ನು ಸುಧಾರಿಸಲು ಅಕಾಡೆಮಿಯ ತರಬೇತಿ ಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಎಂಎಎಸ್ಡಿಸಿಎಯ ಗಮನ, ಕೇವಲ ನೆಟ್ಗಳಲ್ಲಿ ಪ್ರದರ್ಶನ ನೀಡಲು ಆಟಗಾರರಿಗೆ ಸಹಾಯ ಮಾಡುವುದಲ್ಲ, ಬದಲಿಗೆ ವಾಸ್ತವವಾಗಿ ಆಟದಲ್ಲಿ ಯಶಸ್ವಿಯಾಗಬಲ್ಲ ವ್ಯಕ್ತಿಯಾಗಿ ಅವರನ್ನು ರೂಪಿಸುವುದು. ಹೀಗಾಗಿ ಬೇರೆ ಅಕಾಡೆಮಿಗಿಂತ ಧೋನಿಯ ಕ್ರಿಕೆಟ್ ಅಕಾಡೆಮಿ ಭಿನ್ನವಾಗಿರಲಿದೆ ಎಂದು ಹೇಳಿದರು.