ನವದೆಹಲಿ : ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಸೂಪರ್ 12 ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡ ನಂತರ ನಾಯಕ ವಿರಾಟ್ ಕೊಹ್ಲಿ ನಮ್ಮ ತಂಡ ಸಾಕಷ್ಟು ಧೈರ್ಯದಿಂದ ಕೂಡಿರಲಿಲ್ಲ ಎಂದು ಹೇಳಿದ್ದರು.
ಆದರೆ, ಇದನ್ನು ದುರ್ಬಲ ಹೇಳಿಕೆ ಎಂದು ಕರೆದಿರುವ ದಿಗ್ಗಜ ಕಪಿಲ್ ದೇವ್, ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಮೆಂಟರ್ ಧೋನಿ ಆಟಗಾರರ ಮನೋಬಲವನ್ನು ಮೇಲೆತ್ತಲು ಮುಂದಾಗಬೇಕಿದೆ ಎಂದು ತಿಳಿಸಿದ್ದಾರೆ.
ಭಾನುವಾರ ದುಬೈನಲ್ಲಿ ನಡೆದ 2ನೇ ಗುಂಪಿನ ಪಂದ್ಯದಲ್ಲಿ ಭಾರತ 20 ಓವರ್ಗಳಲ್ಲಿ 110 ರನ್ಗಳಿಸಿತ್ತು. ಈ ಮೊತ್ತವನ್ನು ನ್ಯೂಜಿಲ್ಯಾಂಡ್ ತಂಡ 2 ವಿಕೆಟ್ ಕಳೆದುಕೊಂಡು ಇನ್ನು 30ಕ್ಕೂ ಹೆಚ್ಚು ಎಸೆತಗಳಿರುವಂತೆ ತಲುಪಿ ಜಯ ಸಾಧಿಸಿತ್ತು.
ಆದರೆ, ಭಾರತೀಯ ಆಟಗಾರರ ದೇಹ ಭಾಷೆ ಪಂದ್ಯಪೂರ್ತಿ ಮಂಕಾಗಿ ಕಂಡಿದ್ದು, 62 ವರ್ಷದ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಧೋನಿ ಮತ್ತು ಶಾಸ್ತ್ರಿ ಆಟಗಾರರಲ್ಲಿ ಮನೋಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಖಂಡಿತವಾಗಿ, ವಿರಾಟ್ ಕೊಹ್ಲಿ ಅಂತಹ ಸ್ಟಾರ್ ಆಟಗಾರನಿಂದ ಬಂದಿರುವ ತುಂಬಾ ದುರ್ಬಲವಾದ ಹೇಳಿಕೆ ಇದು. ನಾವೆಲ್ಲರೂ ಅವರನ್ನು ಹಸಿವಿನಿಂದ ಕೂಡಿರುವ ಮತ್ತು ತಂಡಕ್ಕೆ ಯಾವುದೇ ಸಂದರ್ಭದಲ್ಲಿ ಗೆಲುವು ತಂದುಕೊಡುವ ಆಟಗಾರ ಎಂದು ನಂಬಿದ್ದೇವೆ.
ಆದರೆ, ತಂಡದ ಆಂಗಿಕ ಭಾಷೆ ಮತ್ತು ನಾಯಕನ ಆಲೋಚನಾ ಕ್ರಮ ಈ ರೀತಿಯಿದ್ದರೆ, ಡ್ರೆಸ್ಸಿಂಗ್ ರೂಮಿನಲ್ಲಿರುವ ಆಟಗಾರರ ಮನಸ್ಥಿತಿಯನ್ನು ಮೇಲೆತ್ತುವುದು ತುಂಬಾ ಕಷ್ಟ ಎಂದಿರುವ ಕಪಿಲ್ ದೇವ್, ಕೊಹ್ಲಿಯ 'ತಂಡದ ದೇಹಭಾಷೆ ಧೈರ್ಯದಿಂದ ಕೂಡಿರಲಿಲ್ಲ' ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ನನ್ನ ಸ್ನೇಹಿತನಾದ ರವಿಶಾಸ್ತ್ರಿ ಮತ್ತು ಮೆಂಟರ್ ಧೋನಿ, ಕುಗ್ಗಿರುವ ತಂಡವನ್ನು ಮೇಲೆತ್ತುವ ಕೆಲಸ ಮಾಡಬೇಕೆಂದು ಒತ್ತಾಯ ಮಾಡುತ್ತೇನೆ. ಆಟಗಾರರೊಡನೆ ಮಾತನಾಡಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕಾದದ್ದು ಧೋನಿ ಕೆಲಸ ಎಂದು ಕಪಿಲ್ ದೇವ್ ತಿಳಿಸಿದ್ದಾರೆ.
ಈಗಾಗಲೇ ಭಾರತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಸೆಮಿಫೈನಲ್ ಪ್ರವೇಶಿಸಬೇಕಾದರೆ, ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಜೊತೆಗೆ ಆಫ್ಘಾನಿಸ್ತಾನ ತನ್ನ ಮುಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಬೇಕಿದೆ.
ಇದೆಲ್ಲಾ ಸಾಧ್ಯವಾದರೆ ಮಾತ್ರ ಭಾರತ ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ, ಕಪಿಲ್ ದೇವ್ ನಾವು ಮುಂದಿನ ಹಂತಕ್ಕೆ ತೇರ್ಗಡೆಯಾಗಲೂ ಬೇರೊಂದು ತಂಡ ಉತ್ತಮ ಪ್ರದರ್ಶನವನ್ನು ಅವಲಂಬಿಸುವುದು ಒಳ್ಳೆಯ ಯೋಜನೆಯಲ್ಲ, ನಾನು ಇಂತಹದನ್ನೆಲ್ಲಾ ಇಷ್ಟಪಡುವುದಿಲ್ಲ ಎಂದಿದ್ದಾರೆ.
ಇದನ್ನು ಓದಿ:ಐಪಿಎಲ್-ಟಿ20 ವಿಶ್ವಕಪ್ ನಡುವೆ ವಿಶ್ರಾಂತಿ ಬೇಕಿತ್ತು: ಬಯೋಬಬಲ್ ಲೈಫ್ ತುಂಬಾ ಕಷ್ಟ ಎಂದ ಬುಮ್ರಾ