ದುಬೈ: ದುಬೈನಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರು ವಿಕೆಟ್ ಜಯ ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅದೃಷ್ಟಶಾಲಿ ಎಂದು ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಸಿಎಸ್ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್, "ರಾಯುಡು ಮತ್ತು ರುತುರಾಜ್ ಉತ್ತಮವಾಗಿ ಬ್ಯಾಟ್ ಬೀಸಿದ್ರು. ಇಬ್ಬರು ಆಟಗಾರರ ವಿಕೆಟ್ ಕಳೆದುಕೊಂಡ ನಂತರ ಕೆಕೆಆರ್ ತಂಡ ಕೊಂಚ ಮೇಲುಗೈ ಸಾಧಿಸಿತು. ನಂತರ ನಮ್ಮ ತಂಡ ಕಂಬ್ಯಾಕ್ ಮಾಡಿತು. ಕೊನೆಯ ಎರಡು ಓವರ್ಗಳು ತುಂಬಾ ಕುತೂಹಲ ಮೂಡಿಸಿದ್ದವು. ಅಂತಿಮವಾಗಿ ತಂಡ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
"ನಾವು ಪಂದ್ಯ ಗೆಲ್ಲಲು ಬೇಕಾದಷ್ಟು ಶ್ರಮ ಹಾಕಿದ್ದೆವು. ಆದರೆ ಜಯ ಸಾಧಿಸಬೇಕಾದ್ರೆ ಸ್ವಲ್ಪ ಅದೃಷ್ಟ ಮತ್ತು ಕೆಲ ತಿರುವು ಬೇಕಾಗುತ್ತದೆ" ಎಂದು ಸಿಎಸ್ಕೆ ತರಬೇತುದಾರ ಹೇಳಿದ್ದಾರೆ.
"ಅವರು ಉತ್ತಮವಾಗಿ ಬೌಲ್ ಮಾಡಿ ಒತ್ತಡ ಸೃಷ್ಟಿಸಿದರು. ನಾವು ವಿಕೆಟ್ ಕಳೆದುಕೊಂಡಾಗ ಅವರು ಪರಿಣಾಮಕಾರಿಯಾಗಿ ದಾಳಿ ನಡೆಸಿದ್ರು. ಕೆಕೆಆರ್ ಬೌಲರ್ಗಳು ಎಸೆದ 80ರಷ್ಟು ಓವರ್ಗಳನ್ನು ನಮ್ಮ ಇಬ್ಬರು ಹುಡುಗರು ಎದುರಿಸಿದ್ದು ಮುಖ್ಯವಾಗಿತ್ತು" ಎಂಂದು ಫ್ಲೆಮಿಂಗ್ ಹೇಳಿದ್ದಾರೆ.
ಕೆಕೆಆರ್ ನೀಡಿದ 173 ರನ್ಗಳ ಗುರಿ ಬೆನ್ನತ್ತಿದ ಸಿಎಸ್ಕೆ ಕೊನೆಯ ಎಸೆತದಲ್ಲಿ ಜಡೇಜಾ ಸಿಡಿಸಿದ ಸಿಕ್ಸರ್ ಹಾಗೂ ಗಾಯಕ್ವಾಡ್ ಅವರ ಅರ್ಧಶತಕದ ನೆರವಿನಿಂದ 6 ವಿಕೆಟ್ಗಳ ಜಯ ಸಾಧಿಸುವ ಜೊತೆಗೆ ಕೆಕೆಆರ್ ಪ್ಲೇ ಆಫ್ ಕನಸಿಗೆ ತಣ್ಣೀರು ಎರಚಿದೆ. ಗಾಯಕ್ವಾಡ್ 53 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 72 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.