ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೊಹಮದ್ ಶಮಿ ವಿರುದ್ಧ ಹೊರಡಿಸಲಾಗಿದ್ದ ಬಂಧನ ವಾರಂಟ್ಗೆ ತಡೆ ನೀಡಲಾಗಿದ್ದು, ಇದರ ತೆರವಿಗೆ ನಿರಾಕರಿಸಿದ ಕೋಲ್ಕತ್ತಾ ಹೈಕೋರ್ಟ್ ಆದೇಶದ ವಿರುದ್ಧ ಪತ್ನಿ ಹಸೀನ್ ಜಹಾನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೇ, ಕಳೆದ 4 ವರ್ಷಗಳಿಂದ ಪ್ರಕರಣ ಯಾವುದೇ ಪ್ರಗತಿ ಕಂಡಿಲ್ಲ ಎಂದೂ ಮನವಿಯಲ್ಲಿ ಆಪಾದಿಸಿದ್ದಾರೆ.
ಪ್ರಕರಣವೇನು?: ಶಮಿ ಮೇಲೆ ಹಸೀನ್ ಜಹಾನ್ ವರದಕ್ಷಿಣೆ ಕಿರುಕುಳ ಮತ್ತು ಅಕ್ರಮ ಸಂಬಂಧ ಪ್ರಕರಣ ದಾಖಲಿಸಿದ್ದು, ಅಲಿಪುರ ಮ್ಯಾಜಿಸ್ಟ್ರೇಟ್ ಕೋರ್ಟ್ ಕ್ರಿಕೆಟರ್ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಇದನ್ನು ಪಶ್ಚಿಮ ಬಂಗಾಳದ ಸೆಷನ್ಸ್ ಕೋರ್ಟಲ್ಲಿ ಪ್ರಶ್ನಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಬಂಧನಕ್ಕೆ ತಡೆ ನೀಡಿತ್ತು. ಇದರ ವಿರುದ್ಧ ಹಸೀನಾ ಜಹಾನ್ ಕೋಲ್ಕತ್ತಾ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಕೋರ್ಟ್ ತಡೆಯನ್ನು ತೆರವು ಮಾಡಲು ನಿರಾಕರಿಸಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
ಶಮಿ ಮೇಲಿರುವ ಆರೋಪಗಳು..: ಮೊಹಮ್ಮದ್ ಶಮಿ ವಿರುದ್ಧ ಅವರ ಪತ್ನಿ ನಟಿ, ಮಾಡೆಲ್ ಹಸೀನಾ ಜಹಾನ್ ಅಕ್ರಮ ಸಂಬಂಧ, ವರದಕ್ಷಿಣೆ ಕಿರುಕುಳದಂತಹ ಗಂಭೀರ ಆರೋಪ ಮಾಡಿದ್ದಾರೆ. 4 ವರ್ಷಗಳ ಹಿಂದೆಯೇ ಇಬ್ಬರೂ ಬೇರ್ಪಟ್ಟಿದ್ದಾರೆ. ಶಮಿ ಅಕ್ರಮವಾಗಿ ವಿವಾಹೇತರ ಲೈಂಗಿಕ ಸಂಬಂಧಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಕ್ರಿಕೆಟ್ ಪ್ರವಾಸದ ವೇಳೆ ಇದನ್ನು ನಡೆಸಿದ್ದಾರೆ. ಬಿಸಿಸಿಐ ಒದಗಿಸಿದ ಹೋಟೆಲ್ ಕೊಠಡಿಗಳಲ್ಲಿಯೇ ಅಕ್ರಮ ಸಂಬಂಧ ಮುಂದುವರಿಸಿದ್ದಾರೆ. ತನಗೆ ವರದಕ್ಷಿಣೆ ನೀಡಲು ಕೋರಿದ್ದಾರೆ. ನನ್ನಿಂದ ಹಣ ಪಡೆದುಕೊಂಡಿದ್ದಾರೆ ಎಂದೆಲ್ಲ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಜಹಾನ್ ಪೊಲೀಸರಿಗೆ ದೂರು ದಾಖಲಿಸಿದ್ದರು. 2019ರ ಆಗಸ್ಟ್ 29 ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಅಲಿಪುರದ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್, ಶಮಿ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದರು. ಕ್ರಿಕೆಟರ್ ಈ ಆದೇಶವನ್ನು ಸೆಷನ್ಸ್ ನ್ಯಾಯಾಲಯದ ಮುಂದೆ ಪ್ರಶ್ನಿಸಿದ್ದರು. ಸೆಪ್ಟೆಂಬರ್ 9, 2019 ರಂದು ಬಂಧನ ವಾರಂಟ್ ಮತ್ತು ಕ್ರಿಮಿನಲ್ ವಿಚಾರಣೆಯ ಸಂಪೂರ್ಣ ಪ್ರಕ್ರಿಯೆಗಳಿಗೆ ಕೋರ್ಟ್ ತಡೆ ನೀಡಿತ್ತು.
ಸೆಷನ್ಸ್ ಕೋರ್ಟ್ ನೀಡಿದ ಆದೇಶದ ವಿರುದ್ಧ ಜಹಾನ್, 2023 ರ ಮಾರ್ಚ್ 28 ರಂದು ಕೋಲ್ಕತ್ತಾ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. 2023 ರ ಮಾರ್ಚ್ 28 ರಂದು ವಿಚಾರಣೆ ನಡೆಸಿದ ಹೈಕೋರ್ಟ್ ವಾರಂಟ್ಗೆ ನೀಡಲಾದ ತಡೆಯನ್ನು ತೆರವು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿತ್ತು. ಪರಿಣಾಮ ಇದೀಗ, ಶಮಿ ಅವರ ಪತ್ನಿ ಕೋಲ್ಕತ್ತಾದ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಸವಾಲು ಮಾಡಿದ್ದಾರೆ.
'ಸೆಲೆಬ್ರಿಟಿಗಳಿಗೆ ಕಾನೂನಿನಲ್ಲಿ ರಿಯಾಯಿತಿ ಬೇಡ': ಮೊಹಮದ್ ಶಮಿ ಕ್ರಿಕೆಟರ್ ಎಂಬ ಕಾರಣಕ್ಕಾಗಿ ವಿಚಾರಣೆ ನಡೆಸಲು ವಿಳಂಬ ಮಾಡಲಾಗುತ್ತಿದೆ. ಸೆಲೆಬ್ರಿಟಿಗಳಿಗೆ ಕಾನೂನಿನಲ್ಲಿ ರಿಯಾಯಿತಿ ನೀಡಬಾರದು. ಇದು ತ್ವರಿತ ವಿಚಾರಣೆಯ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹೈಕೋರ್ಟ್ ನೀಡಿದ ಆದೇಶ ಆಕ್ಷೇಪಾರ್ಹವಾಗಿದೆ ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಮನವಿಯಲ್ಲಿ ದೂರಿದ್ದಾರೆ. ಗಮನಾರ್ಹವಾಗಿ, ಕಳೆದ 4 ವರ್ಷಗಳಿಂದ ವಿಚಾರಣೆಯು ಪ್ರಗತಿ ಕಂಡಿಲ್ಲ. ವಿನಾಕಾರಣ ತಡೆಹಿಡಿಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
"ಪ್ರಸ್ತುತ ಪ್ರಕರಣದ ಕ್ರಿಮಿನಲ್ ವಿಚಾರಣೆಯನ್ನು ಕಳೆದ 4 ವರ್ಷಗಳಿಂದ ಯಾವುದೇ ಸಕಾರಣಗಳಿಲ್ಲದೇ ತಡೆಹಿಡಿಯಲಾಗಿದೆ. ಬಂಧನ ವಾರಂಟ್ ಹೊರಡಿಸಿದ್ದರೂ, ಆಪಾದಿತನ ಮೇಲೆ ಯಾವುದೇ ಕ್ರಮವಾಗಿಲ್ಲ. ಈ ವಾರಂಟ್ ಇನ್ನೂ ಜಾರಿಯಲ್ಲಿದೆ. ಸೆಷನ್ಸ್ ನ್ಯಾಯಾಲಯ ಪಕ್ಷಪಾತದ ರೀತಿಯಲ್ಲಿ ವರ್ತಿಸಿದೆ. ಇದರಿಂದಾಗಿ ಅರ್ಜಿದಾರರ ಹಕ್ಕು ಕಸಿದಂತಾಗಿದೆ. ಪೂರ್ವಾಗ್ರಹ ಪೀಡಿತ ಆದೇಶವಾಗಿದೆ" ಎಂದು ದೂರಿದ್ದಾರೆ.
ಶಮಿ ಅವರ ಪತ್ನಿ ಜಹಾನ್, ವಕೀಲರಾದ ದೀಪಕ್ ಪ್ರಕಾಶ್, ನಚಿಕೇತ ವಾಜಪೇಯಿ ಮತ್ತು ದಿವ್ಯಾಂಗ್ನಾ ಮಲಿಕ್ ವಾಜಪೇಯಿ ಅವರ ಮೂಲಕ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: 'ಇದು ಸರಿ ಕಾಣ್ತಿಲ್ಲ': ಕೊಹ್ಲಿ, ಗಂಭೀರ್ ಮಾತಿನ ಚಕಮಕಿ ಬಗ್ಗೆ ಕುಬ್ಳೆ ಅಭಿಪ್ರಾಯ