ಬೆಂಗಳೂರು: ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿ ಸ್ಟೋನ್ಹಿಲ್ ಇಂಟರ್ ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ವ್ಹೀಲ್ಚೇರ್ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ಹಮ್ಮಿಕೊಂಳ್ಳಲಾಗಿತ್ತು. ಎರಡು ದಿನಗಳ ಟೆಸ್ಟ್ ಮ್ಯಾಚ್, ಏಕದಿನ, ಟಿ-10 ಮತ್ತು ಎರಡು ಟಿ-20 ಪಂದ್ಯಗಳನ್ನು ಆಯೋಜಿಸಲಾಗಿತ್ತು.
ಡಿಸೆಂಬರ್ 10 ರಿಂದ 13 ರ ವರಗೆ ನಡೆದ ದೇಶದ ಮೊದಲ ಮೊದಲ ವ್ಹೀಲ್ಚೇರ್ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆಂಧ್ರಪ್ರದೇಶದ ವಿರುದ್ಧ ಕರ್ನಾಟಕ ಭರ್ಜರಿ ಜಯಗಳಿಸಿ ಗೆಲುವಿನ ನಗೆ ಬೀರಿತು. ಆಂಧ್ರದ ತಂಡ ಮೊದಲ ಇನ್ನಿಂಗ್ಸ್ನಲ್ಲಿ 18 ರನ್ ಗೆ ಆಲೌಟ್ ಆಯಿತು. ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ 217 ರನ್ ನೀಡಿ ಡಿಕ್ಲೇರ್ ಮಾಡಿಕೊಂಡಿತ್ತು. ಆಂಧ್ರ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ 76 ರನ್ ಗೆ ಆಲೌಟ್ ಆಗುವ ಮೂಲಕ ಕರ್ನಾಟಕ ತಂಡದ ವಿರುದ್ಧ ಸೋಲೊಪ್ಪಿಕೊಂಡಿತು.
ಏಕದಿನ, ಟಿ-10 ಹಾಗೂ ಟಿ-20 ಪಂದ್ಯಾವಳಿಗಳಲ್ಲಿ ಕೂಡ ಕರ್ನಾಟಕ ಭರ್ಜರಿ ಗೆಲುವು ಪಡೆಯಿತು. ರಾಜ್ಯ ತಂಡದ ತಿಪ್ಪೇಸ್ವಾಮಿ ಎಲ್ಲಾ ಮಾದರಿಯ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಬೌಲರ್ ಶಿವಕುಮಾರ್ ಟೆಸ್ಟ್ ಪಂದ್ಯದಲ್ಲಿ ಅತ್ಯತ್ತಮ ಪ್ರದರ್ಶನ ತೋರಿದ್ದಾರೆ.
ಜಗತ್ತಿನಾದ್ಯಂತ ಕ್ರಿಕೆಟ್ ಟೂರ್ನಿಗಳು ಗರಿಗೆದರುತ್ತಿದ್ದರೂ ಕೊರೊನಾ ಹಿನ್ನೆಲೆಯಲ್ಲಿ ಸರಣಿ ಆಯೋಜನೆಗೆ ಭೀತಿಯಂತೂ ಇದ್ದೆ ಇತ್ತು. ಆದರೆ, ಇಂತಹ ಭೀತಿ ಮಧ್ಯ ಕರ್ನಾಟಕದ ದಿವ್ಯಾಂಗ ಮೈತ್ರಿ ಸ್ಪೋರ್ಟ್ ಆಕಾಡೆಮಿ ವತಿಯಿಂದ ವಿಶ್ವದಲ್ಲೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವೊಂದನ್ನು ಆಯೋಜಿಸುವ ಮೂಲಕ ದಾಖಲೆ ಮೆರೆದಿದೆ.
ವ್ಹೀಲ್ಚೇರ್ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವೊಂದನ್ನು ಆಯೋಜಿಸಿದ್ದು, ಕನ್ನಡಿಗರೇ ಕಟ್ಟಿದ ದಿವ್ಯಾಂಗ ಮೈತ್ರಿ ಸ್ಪೋರ್ಟ್ ಆಕಾಡೆಮಿ ಇದನ್ನು ಆಯೋಜಿಸಿ ಯಶಸ್ವಿಯಾಗಿದ್ದು ಹೆಮ್ಮೆಯ ವಿಷಯವಾಗಿದೆ. ಇದರ ಜತೆಗೆ ಕ್ರಿಕೆಟ್ ಕನಸು ಹೊತ್ತಿರುವ ದಿವ್ಯಾಂಗರ ಕನಸಿಗೂ ಅಕಾಡೆಮಿ ನೀರೆಯುತ್ತಿದೆ ಎಂಬುದು ಗಮನಾರ್ಹವಾಗಿದೆ.
ಕನ್ನಡಿಗರು, ಅದರಲ್ಲೂ ಆಟಗಾರರೇ ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಆಕಾಡೆಮಿ ಎಂಬ ಸಂಸ್ಥೆ, ನೂರಾರು ಕ್ರೀಡಾಸಕ್ತರಿಗೆ ತರಬೇತಿ ನೀಡಲು, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಹಾಯ ಮಾಡಿದೆ . ದೇಶದ ವ್ಹೀಲ್ಚೇರ್ ಕ್ರಿಕೆಟ್ ತಂಡದ ಉಪನಾಯಕ, ರಾಜ್ಯ ತಂಡದ ನಾಯಕ ಶಿವಪ್ರಸಾದ್ ಅವರು ಅಕಾಡೆಮಿಯ ಸಂಸ್ಥಾಪಕರಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ವ್ಹೀಲ್ ಚೇರ್ ಟೆನಿಸ್ ಆಟಗಾರ ದಿಲೀಪ್ ಕುಮಾರ್ ಸಹ ಸಂಸ್ಥಾಪಕರಾಗಿದ್ದಾರೆ. 2017ರಲ್ಲಿ ಅಕಾಡೆಮಿ ಸ್ಥಾಪಿಸಿ, ತರಬೇತಿ ನೀಡಲು ಆರಂಭಿಸಿದ ಇವರ ಪರಿಶ್ರಮದ ಫಲವಾಗಿ ಈಗ ಕರ್ನಾಟಕದಿಂದ ರಾಷ್ಟ್ರೀಯ ತಂಡಕ್ಕೆ ನಾಲ್ವರು ಆಯ್ಕೆಯಾಗಿದ್ದಾರೆ ಎಂಬುದು ಶ್ಲಾಘನೀಯವಾಗಿದೆ.
ಬೆಂಗಳೂರಿನ ಜಯನಗರದಲ್ಲಿ ಎರಡು ನೆಟ್ಸ್, ವ್ಹೀಲ್ ಚೇರ್ ಸೇರಿ ಹಲವು ಸೌಲಭ್ಯಗಳು ಇವೆ. ತುಮಕೂರು, ಮೈಸೂರು, ಬೆಳಗಾವಿ, ರಾಯಚೂರು ಸೇರಿ ಹಲವೆಡೆ ಜನರು ತರಬೇತಿ ಪಡೆಯುತ್ತಿದ್ದಾರೆ.
ವ್ಹೀಲ್ ಚೇರ್ ಮೇಲೆ ಕುಳಿತು ಕ್ರಿಕೆಟ್ ಆಡುವ, ಆಡುತ್ತಿರುವವರಿಗೆ ನೆರವು ನೀಡುತ್ತಿರುವ ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಆಕಾಡೆಮಿಗೆ ಸರ್ಕಾರದ ನೆರವು ಬೇಕಿದೆ. ಬ್ರಿಟನ್, ನೇಪಾಳ, ಬಾಂಗ್ಲಾದೇಶ, ಆಸ್ಪ್ರೇಲಿಯಾ ದೇಶಗಳಲ್ಲಿ ವ್ಹೀಲ್ ಚೇರ್ ಕ್ರಿಕೆಟ್ಗೆ ಹೆಚ್ಚಿನ ಉತ್ತೇಜನ ಸಿಗುತ್ತಿರುವ ಸಂದರ್ಭದಲ್ಲಿ, ಕರ್ನಾಟಕದಲ್ಲೂ ಇಂತಹ ಅಕಾಡೆಮಿ ಸ್ಥಾಪಿಸಿ, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವವರಿಗೆ ಸರ್ಕಾರ ಸಹ ನೆರವು ನೀಡಿದರೆ ಮತ್ತಷ್ಟು ಅನುಕೂಲವಾಗಲಿದೆ.
ಉತ್ತರ ಭಾರತದಲ್ಲಿ ವ್ಹೀಲ್ ಚೇರ್ ಕ್ರಿಕೆಟ್ ಪ್ರೋತ್ಸಾಹ ನೋಡಿ, ಕರ್ನಾಟಕದಲ್ಲೂ ಯಾಕೆ ಇಂತಹ ಅಕಾಡೆಮಿ ಮಾಡಬಾರದು, ನಮ್ಮ ಕ್ರೀಡಾಸಕ್ತರಿಗೂ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಸಂಸ್ಥೆ ಆರಂಭಿಸಿದೆವು. ಈಗ 150 ಜನ ತರಬೇತಿ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಶಿವಪ್ರಸಾದ್ ಹೇಳುತ್ತಾರೆ.
ನನ್ನ ಕ್ರಿಕೆಟ್ ಆಸಕ್ತಿ ನೋಡಿ ಅಕಾಡೆಮಿ ಬಗ್ಗೆ ಗೆಳೆಯರೊಬ್ಬರು ಮಾಹಿತಿ ನೀಡಿದರು. ಇದಾದ ಬಳಿಕ ಅಕಾಡೆಮಿಯಲ್ಲಿ ತರಬೇತಿ ಪಡೆದೆ. ಅಕಾಡೆಮಿ ನೆರವಿನಿಂದಲೇ ನಾನೀಗ ವ್ಹೀಲ್ ಚೇರ್ ಕ್ರಿಕೆಟ್ ಇಂಡಿಯಾ ಅಸೋಸಿಯೇಷನ್ ಮೂಲಕ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದು, ಪಾಕಿಸ್ತಾನ ತಂಡದ ವಿರುದ್ಧ ಆಡಲು ಸಹಕಾರಿಯಾಗಿದೆ ಎಂದು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ರಾಜ್ಯದ ಆಟಗಾರ ತಿಪ್ಪೇಸ್ವಾಮಿ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ.