ಮುಂಬೈ: ಲಂಡನ್ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಬಳಿಕ ಟೀಂ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್. ಧೋನಿ ಯಾವುದೇ ಕ್ರಿಕೆಟ್ ಪಂದ್ಯದಲ್ಲೂ ಭಾಗಿಯಾಗಿಲ್ಲ. ಇದೀಗ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅವರು ಅವಕಾಶ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಸರಣಿಯಲ್ಲೂ ಅವರು ತಂಡದಿಂದ ಹೊರಗುಳಿದಿದ್ದಾರೆ.
ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಇದೇ ವಿಷಯವಾಗಿ ಮಾತನಾಡಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಧೋನಿ ನೀಡುವ ಪ್ರದರ್ಶನದ ಮೇಲೆ ಅವರ ಕ್ರಿಕೆಟ್ ಭವಿಷ್ಯ ನಿರ್ಧಾರವಾಗಲಿದೆ ಎಂದು ತಿಳಿಸಿದ್ದಾರೆ. ಮುಂದಿನ ಟಿ20 ಕ್ರಿಕೆಟ್ ವಿಶ್ವಕಪ್ನಲ್ಲಿ ಧೋನಿ ಭಾಗಿಯಾಗಬೇಕೋ, ಬೇಡ್ವೋ ಎಂಬುದರ ಕುರಿತು ಐಪಿಎಲ್ನಲ್ಲಿ ಅವರು ನೀಡುವ ಪ್ರದರ್ಶನ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.
ಮುಂದಿನ ಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾದ 15 ಸದಸ್ಯರು ಯಾರೆಲ್ಲ ಎಂಬುದರ ಬಗ್ಗೆ ಐಪಿಎಲ್ನಲ್ಲಿ ಗೊತ್ತಾಗಲಿದ್ದು, ಧೋನಿ ನೀಡುವ ಪ್ರದರ್ಶನ ಸಹ ಇಲ್ಲಿ ಕೌಂಟ್ ಆಗಲಿದೆ ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ಗೂ ಮುನ್ನವೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾಗಿಯಾಗಲಿದ್ದು, ಐಸಿಸಿಯಿಂದ ಮಾನ್ಯತೆ ಪಡೆದುಕೊಂಡಿರುವ ವಿಶ್ವ ಇಲೆವೆನ್ ವಿರುದ್ಧ ಸೆಣೆಸಾಡಲು ಏಷ್ಯಾ ಇಲೆವೆನ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 7 ಆಟಗಾರರನ್ನು ನೀಡಲು ಬಾಂಗ್ಲಾ ಕ್ರಿಕೆಟ್ ಬೋರ್ಡ್ ಬಿಸಿಸಿಐಗೆ ಮನವಿ ಮಾಡಿದೆ.