ಮುಂಬೈ: ರಣಜಿ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿ(ಡಿಆರ್ಎಸ್) ಜಾರಿಗೆ ತರಲು ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಅಲ್ಟ್ರಾ ಎಡ್ಜ್ ಹಾಗೂ ಬಾಲ್ ಟ್ರ್ಯಾಕಿಂಗ್ ಸೌಲಭ್ಯ ಮಾತ್ರ ಇರುವುದಿಲ್ಲ ಎಂದು ತಿಳಿಸಿದೆ.
ಕರ್ನಾಟಕ- ಬೆಂಗಾಲ್, ಗುಜರಾತ್-ಸೌರಾಷ್ಟ್ರಗಳ ನಡುವೆ ಶನಿವಾರದಿಂದ ನಡೆಯಲಿರುವ ರಣಜಿ ಸೆಮಿಫೈನಲ್ ಪಂದ್ಯಗಳಿಂದಲೇ ಡಿಆರ್ಎಸ್ ನಿಯಮ ಜಾರಿಗೆ ಬರಲಿದೆ.
ಒಂದೇ ಇನ್ನಿಂಗ್ಸ್ನಲ್ಲಿ ಎರಡು ತಂಡಗಳಿಗೂ ತಲಾ ಎರಡು ರಿವ್ಯೂ ತೆಗೆದುಕೊಳ್ಳುವ ಅವಕಾಶವನ್ನು ಅಂತಾರಾಷ್ಟ್ರೀಯ ಟೆಸ್ಟ್ನಲ್ಲಿ ನೀಡಲಾಗಿದೆ. ಆದರೆ ರಣಜಿಯಲ್ಲಿ 4 ರಿವ್ಯೂ ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ. ರಿವ್ಯೂ ಯಶಸ್ವಿಯಾದರೆ ಮತ್ತೆ ಬಳಸಿಕೊಳ್ಳಬಹುದಾಗಿದೆ.
ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇರುವ ಬಾಲ್ ಟ್ರ್ಯಾಕಿಂಗ್, ಹಾಟ್ಸ್ಪಾಟ್, ನೋ ಸ್ನಿಕೋ ಸೌಲಭ್ಯಗಳಿರುವುದಿಲ್ಲ. ಹಾಗಾಗಿ ಮೈದಾನದ ಅಂಪೈರ್ ತೀರ್ಪನ್ನು ಮೂರನೇ ಅಂಪೈರ್ ಟಿವಿ ರಿಪ್ಲೇ ನೋಡಿ ತೀರ್ಪು ನೀಡಲಿದ್ದಾರೆ.
ರಣಜಿ, ವಿಜಯ್ ಹಜಾರೆ, ಸಯ್ಯದ್ ಮುಷ್ತಾಕ್ ಅಲಿ ಸೇರಿದಂತೆ ಪ್ರಮುಖ ಟೂರ್ನಿಗಳ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಡಿಆರ್ಎಸ್ ನಿಯಮ ಜಾರಿ ಬರಲಿದೆ.
ಕಳೆದ ರಣಜಿ ಸೆಮಿಫೈನಲ್ನಲ್ಲಿ ಸೌರಾಷ್ಟ್ರ-ಕರ್ನಾಟಕ ಪಂದ್ಯದಲ್ಲಿ ಪೂಜಾರ ಮೂರು ಬಾರಿ ಕ್ಯಾಚ್ ನೀಡಿದರೂ ಅಂಪೈರ್ ಔಟ್ ನೀಡದಿದ್ದಕ್ಕೆ ಮೈದಾನದಿಂದ ಹೊರ ನಡೆದಿರಲಿಲ್ಲ. ಈ ಪಂದ್ಯದ ನಂತರ ದೇಶಿ ಟೂರ್ನಿಗಳಿಗೂ ಡಿಆರ್ಎಸ್ ಬೇಕು ಎಂಬ ಕೂಗು ಕೇಳಿ ಬಂದಿತ್ತು.