ಮುಂಬೈ: ಭಾರತ ತಂಡದ ಶ್ರೇಷ್ಠ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಅವರು ಸಾವಿರಾರು ಯುವ ಕ್ರಿಕೆಟಿಗರಿಗೆ ಗುರು, ಸ್ಫೂರ್ತಿಯಾಗಿದ್ದಾರೆ. ಹೊಡಿಬಡಿ ಆಟದ ನಡುವೆ ಟೆಸ್ಟ್ನಂತಹ ದೀರ್ಘಾವಧಿ ಆಟ ಜೀವಂತವಾಗಿದೆಯೆಂದರೆ ಅದಕ್ಕೆ ದ್ರಾವಿಡ್ರಂತಹ ದಿಗ್ಗಜ ಪ್ರಮುಖ ಕಾರಣ.
ಕಳೆದ ಮೂರು-ನಾಲ್ಕು ವರ್ಷಗಳಿಂದ ಭಾರತ ಎ, ಅಂಡರ್ 19 ಕ್ರಿಕೆಟ್ ತಂಡದ ಕೋಚ್ ಆಗಿ ದ್ರಾವಿಡ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವೇಳೆ ಅವರ ಗರಡಿಯಲ್ಲಿ ಪಳಗಿರುವ ತಮಿಳುನಾಡಿನ ವಿಜಯ್ ಶಂಕರ್ ತಮ್ಮ ಇನ್ಸ್ಟಾಗ್ರಾಮ್ ಲೈವ್ ವೇಳೆ ದ್ರಾವಿಡ್ ತಮ್ಮ ಕ್ರಿಕೆಟ್ ಜೀವನಕ್ಕೆ ಸ್ಫೂರ್ತಿ ಎಂದಿದ್ದಾರೆ.
"ನಾನು ಕ್ರಿಕೆಟಿಗನಾಗಲು ದ್ರಾವಿಡ್ ಕಾರಣ, ಅವರ ಆಟವನ್ನು ನೋಡಿಕೊಂಡೇ ಬೆಳೆದೆ. 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಅಡಿಲೇಡ್ನಲ್ಲಿ ನಡೆದಿದ್ದ ಟೆಸ್ಟ್ ನೋಡಿದ ಮೇಲೆ ದ್ರಾವಿಡ್ರ ಅಭಿಮಾನಿಯಾಗಿಬಿಟ್ಟೆ" ಎಂದು ಶಂಕರ್ ಹೇಳಿಕೊಂಡಿದ್ದಾರೆ.
2003ರಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ನಡೆಸಿ ರಿಕಿ ಪಾಂಟಿಂಗ್ 242 ರನ್ಗಳ ಸಹಾಯದಿಂದ 556 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಭಾರತ ತಂಡ 84 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಬ್ಯಾಟಿಂಗ್ಗಿಳಿದಿದ್ದ ದ್ರಾವಿಡ್(233) ಮತ್ತು ಲಕ್ಷ್ಮಣ್ 303 ರನ್ಗಳ ಜೊತೆಯಾಟ ಆಡಿ 523 ರನ್ಗಳನ್ನು ಪೇರಿಸಿದ್ದರು.
ಇನ್ನು ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 196 ರನ್ ಗಳಿಸಿತ್ತು. 220 ರನ್ಗಳ ಗುರಿ ಬೆನ್ನತ್ತಿದ್ದ ಭಾರತ 6 ವಿಕೆಟ್ ಕಳೆದುಕೊಂಡು ತಲುಪಿ ದಾಖಲೆಯ ಜಯ ಸಾಧಿಸಿತ್ತು. ಎರಡನೇ ಇನ್ನಿಂಗ್ಸ್ನಲ್ಲೂ ದ್ರಾವಿಡ್ 72 ರನ್ ಗಳಿಸಿದ್ದರು.