ನವದೆಹಲಿ: ಮಹಾಮಾರಿ ಕೊರೊನಾ ಸೋಂಕು ಹರಡುವ ಕಾರಣಕ್ಕಾಗಿ ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರೀಡಾಭಿಮಾನಿಗಳಿಲ್ಲದೇ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸದಿರುವ ಸಂಬಂಧ ಅಲ್ಲಿನ ಸರ್ಕಾರ ನಿರ್ಧಾರ ಕೈಗೊಂಡಿದೆ.
ಈಗಾಗಲೇ ದೆಹಲಿ ಸರ್ಕಾರ ಎಲ್ಲ ರೀತಿಯ ಕ್ರೀಡೆ ಬ್ಯಾನ್ ಮಾಡಿ ಆದೇಶ ಹೊರಹಾಕಿದ್ದು, ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ನಡೆಸದಿರುವ ಮುಂದಾಗಿದೆ. 200ಕ್ಕಿಂತಲೂ ಹೆಚ್ಚಿನ ಜನರು ಒಟ್ಟಿಗೆ ಸೇರುವ ಕಾರ್ಯಕ್ರಮಗಳ ಮೇಲೆ ನಿಷೇಧ ಹಾಕಿರುವ ಕೇಜ್ರಿವಾಲ್ ಸರ್ಕಾರ, ಶಾಲೆ, ಕಾಲೇಜ್ ಹಾಗೂ ಸಿನಿಮಾ ಹಾಲ್ಗಳನ್ನ ಮಾರ್ಚ್ 31ರವರೆಗೆ ಬಂದ್ ಮಾಡಿ ಮಹತ್ವದ ನಿರ್ಧಾರ ಹೊರಹಾಕಿದೆ.

ಮುಂದಿನ ಆದೇಶ ಹೊರ ಬೀಳುವವರೆಗೂ ದೆಹಲಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸದಿರುವ ಅಲ್ಲಿನ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.. ದೇಶದಲ್ಲಿ ಕೊರೊನಾ ಸೋಂಕು ತಗುಲಿರುವವರ ಸಂಖ್ಯೆ ಭಾರತದಲ್ಲೂ 70ರ ಗಡಿ ದಾಟಿದ್ದು, ಕರ್ನಾಟಕದಲ್ಲಿ ಓರ್ವ ವೃದ್ಧ ಇದೇ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಇನ್ನು ಮಹಾರಾಷ್ಟ್ರದಲ್ಲೂ ಯಾವುದೇ ಕ್ರೀಡಾಭಿಮಾನಿಗಳಿಲ್ಲದೇ ಐಪಿಎಲ್ ಟೂರ್ನಿ ನಡೆಸಲು ಅಲ್ಲಿನ ಸರ್ಕಾರ ಮುಂದಾಗಿದ್ದು, ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ನಡೆಸಲು ಮುಂದಾಗಿದೆ. ಮಾರ್ಚ್ 29ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದ್ದು, ದೆಹಲಿ ಕ್ಯಾಪಿಟಲ್ಸ್ ತನ್ನ ತವರು ಪಂದ್ಯಗಳನ್ನ ದೆಹಲಿಯಲ್ಲಿ ಆಡಬೇಕಾಗಿತ್ತು. ಆದರೆ, ಇದೀಗ ದೆಹಲಿ ಸರ್ಕಾರದಿಂದ ಮಹತ್ವದ ನಿರ್ಧಾರ ಹೊರಬಿದ್ದಿರುವ ಕಾರಣ, ಪ್ರಾಂಚೈಸಿ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.