ಮುಂಬೈ: ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಉದಯೋನ್ಮುಖ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಮುಂಬರುವ ಬಾಂಗ್ಲಾದೇಶ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೆ ಆಯ್ಕೆಯಾಗಿದ್ದಾರೆ.
ಬಾಂಗ್ಲಾ ವಿರುದ್ಧ ನವೆಂಬರ್ 3ರಂದು ದೆಹಲಿಯಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಮೂರು ಪಂದ್ಯ ಒಳಗೊಂಡಿರುವ ಸರಣಿಗೆ ಸ್ಯಾಮ್ಸನ್ ಸೇರ್ಪಡೆ ಹಿಂದಿನ ಉದ್ದೇಶವನ್ನು ಆಯ್ಕೆ ಸಮಿತಿ ಮುಖ್ಯಸ್ಥ ಬಹಿರಂಗಪಡಿಸಿದ್ದಾರೆ.

ಬಾಂಗ್ಲಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ: ಟಿ-20ಗೆ ರೋಹಿತ್ನೇ ನಾಯಕ!
"ಓರ್ವ ಪರಿಪೂರ್ಣ ಬ್ಯಾಟ್ಸ್ಮನ್ ಎನ್ನುವ ಕಾರಣಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಟೀಂನಲ್ಲಿ ಸೇರಿಸಿಕೊಳ್ಳಲಾಗಿದೆ. ತಂಡದಲ್ಲಿ ರಿಷಭ್ ಪಂತ್ ವಿಕೆಟ್ ಕೀಪರ್ ಆಗಿಯೇ ಮುಂದುವರೆಯಲಿದ್ದಾರೆ. ಮೂರ್ನಾಲ್ಕು ವರ್ಷಗಳ ಹಿಂದೆ ಸ್ಯಾಮ್ಸನ್ ಕಳಪೆ ಫಾರ್ಮ್ನಿಂದ ಒದ್ದಾಡುತ್ತಿದ್ದರು. ಆದರೀಗ ಅವರು ಉತ್ತಮ ಬ್ಯಾಟ್ಸ್ಮನ್ ಆಗಿ ಬದಲಾಗಿದ್ದಾರೆ. ಹೀಗಾಗಿ ಅವರನ್ನು ಸದ್ಯ ಅಗ್ರ ಕ್ರಮಾಂಕದ ದಾಂಡಿಗನಾಗಿ ಗುರುತಿಸಿದ್ದೇವೆ" ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಹೇಳಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಸಂಜು ಸ್ಯಾಮ್ಸನ್ ಅಮೋಘ ಪ್ರದರ್ಶನ ಪ್ರದರ್ಶನ ನೀಡಿದ್ದು, ಗೋವಾ ವಿರುದ್ಧ ದಾಖಲೆಯ ದ್ವಿಶತಕ ಸಿಡಿಸಿ ಅಬ್ಬರಿಸಿದ್ದರು. ಕೇವಲ 129 ಎಸೆತದಲ್ಲಿ 212 ರನ್ ಕಲೆಹಾಕಿದ್ದ ಕ್ರಿಕೆಟಿಗ ತಮ್ಮ ಪ್ರತಿಭೆಯನ್ನು ಕ್ರಿಕೆಟ್ ಲೋಕದೆದುರು ತೋರಿಸಿದ್ದರು.