ಮೆಲ್ಬೋರ್ನ್: ಬ್ಯಾಟಿಂಗ್ ವೈಫಲ್ಯದಿಂದ ಅಡಿಲೇಡ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುವಂತಾಗಿದ್ದು, ವಿಕೆಟ್ಕೀಪರ್-ಬ್ಯಾಟ್ಸ್ಮನ್ ವೃದ್ಧಿಮಾನ್ ಸಹಾ ಮತ್ತು ಯುವ ಓಪನರ್ ಪೃಥ್ವಿ ಶಾ ಅವರನ್ನು ಉಳಿದಿರುವ ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಇದೆ.
ಸಿಡ್ನಿಯಲ್ಲಿ ನಡೆಯುವ ಮೂರನೇ ಟೆಸ್ಟ್ ಪಂದ್ಯದವರೆಗೂ ರೋಹಿತ್ ಶರ್ಮಾ ಲಭ್ಯವಿಲ್ಲದ ಕಾರಣ ಅಭ್ಯಾಸ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಯುವ ಆಟಗಾರ ಶುಬ್ಮನ್ ಗಿಲ್, ಪೃಥ್ವಿ ಶಾ ಬದಲು ಕಣಕ್ಕಿಳಿಯುವ ಸಾಧ್ಯತೆ ಇದೆ.

ಸಹಾ ಅವರ ಬ್ಯಾಟಿಂಗ್ ಯಾವುದೇ ವಿಶ್ವಾಸವನ್ನು ನೀಡದ ಕಾರಣ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಿಷಭ್ ಪಂತ್ ರನ್ನು ಟೀಂ ಮ್ಯಾನೇಜ್ಮೆಂಟ್ ಆಯ್ಕೆ ಮಾಡುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಶಮಿ ಅಲಭ್ಯರಾಗಿದ್ದು, ಕೆ.ಎಲ್.ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಕೂಡ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಪೃಥ್ವಿ ಶಾ
ತಮ್ಮ ಬ್ಯಾಟಿಂಗ್ ಶೈಲಿಯಿಂದ ಎಲ್ಲರ ಗಮನ ಸೆಳೆದಿದ್ದ ಪೃಥ್ವಿ ಶಾ, ವೈಫಲ್ಯ ಕಾಣುತ್ತಿದ್ದಾರೆ. ಫಾರ್ಮ್ನಲ್ಲಿ ಇಲ್ಲದಿದ್ದರೂ ಉತ್ತಮ ಅವಕಾಶ ಪಡೆದ ಶಾ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಕೇವಲ ಬ್ಯಾಟಿಂಗ್ ಮಾತ್ರವಲ್ಲ, ಕ್ಷೇತ್ರರಕ್ಷಣೆಯಲ್ಲೂ ಎಡವಿದ ಅವರು ಮೊದಲ ಇನ್ನಿಂಗ್ಸ್ನಲ್ಲಿ ಲಾಬುಶೇನ್ ಕ್ಯಾಚ್ ಕೈ ಚೆಲ್ಲಿದ್ರು. ಇದರಿಂದ ಆಸೀಸ್ ತಂಡಕ್ಕೆ ಹೆಚ್ಚುರಿಯಾಗಿ 30 ರನ್ ಹರಿದು ಬಂತು.

ಬದಲಾಗಬೇಕಿದೆ ಹನುಮ ವಿಹಾರಿ ಬ್ಯಾಟಿಂಗ್ ಕ್ರಮಾಂಕ
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ವಿಹಾರಿ ಅವರನ್ನು ಮೇಲಿನ ಕ್ರಮಾಂಕದಲ್ಲಿ ಆಡಿಸುವುದು ಉತ್ತಮ ಎಂದು ಬಿಸಿಸಿಐ ಆಯ್ಕೆದಾರರ ಮಾಜಿ ಅಧ್ಯಕ್ಷ ಎಂ.ಕೆ.ಪ್ರಸಾದ್ ಹೇಳಿದ್ದಾರೆ. ವಿಹಾರಿಯನ್ನು ಹತ್ತಿರದಿಂದ ಕಂಡಿರುವ ಪ್ರಸಾದ್, ಅವರನ್ನು 5 ನೇ ಸ್ಥಾನದಲ್ಲಿ ಕಣಕ್ಕಿಳಿಸುವುದು ಕೆಟ್ಟ ಆಲೋಚನೆಯಲ್ಲ ಎಂದಿದ್ದಾರೆ. "ವಿರಾಟ್ ಅನುಪಸ್ಥಿತಿಯಲ್ಲಿ, ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ವಿಹಾರಿ ಮತ್ತು ಕೆ.ಎಲ್.ರಾಹುಲ್ಗೆ ಇದು ಒಂದು ಉತ್ತಮ ಅವಕಾಶವಾಗಿದೆ" ಎಂದು ಪ್ರಸಾದ್ ಹೇಳಿದ್ದಾರೆ.
"ಮುಂದಿನ ಕೆಲವು ಟೆಸ್ಟ್ ಪಂದ್ಯಗಳಲ್ಲಿ ವಿಹಾರಿಯನ್ನು 4 ಅಥವಾ 5 ನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಕಳುಹಿಸಿದರೆ ಉತ್ತಮ. ಅವನು ಧೈರ್ಯಶಾಲಿ ಹುಡುಗ ಮತ್ತು ಸವಾಲನ್ನು ನೀಡಿದರೆ ಅವನು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾನೆ ಎಂಬ ವಿಶ್ವಾಸವಿದೆ. ಈ ಸರಣಿಯಲ್ಲಿ ಕೆ.ಎಲ್.ರಾಹುಲ್ 6ನೇ ಸ್ಥಾನದಲ್ಲಿ ಆಡುವುದು ಉತ್ತಮ" ಎಂದಿದ್ದಾರೆ.
ಮೊಹಮ್ಮದ್ ಸಿರಾಜ್ಗೆ ಸಿಗುತ್ತಾ ಅವಕಾಶ?
ತಂದೆಯನ್ನು ಕಳೆದುಕೊಂಡ ನೋವು ಇದ್ದರೂ ಸಿರಾಜ್ ತವರಿಗೆ ಮರಳದೆ ಆಸೀಸ್ ಸರಣಿಯಲ್ಲಿ ಮುಂದುವರೆದಿದ್ದಾರೆ. ಶಮಿ ಅನುಪ ಸ್ಥಿತಿಯಲ್ಲಿ ಸಿರಾಜ್ ಮೆಲ್ಬೋರ್ನ್ನಲ್ಲಿ ಕಣಕ್ಕಿಳಿದು 5-6 ಆರು ವಿಕೆಟ್ ಪಡೆದರೆ ಟೀಂ ಇಂಡಿಯಾಕ್ಕೆ ವರವಾಗಿ ಪರಿಣಮಿಸಲಿದೆ. ಸೈನಿ ಮತ್ತು ಸಿರಾಜ್ ನಡುವೆ ಪೈಪೋಟಿ ಇದ್ದು, ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿರುವ ಕಾರಣ ಸಿರಾಜ್ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.