ರಾಯ್ಪುರ: ಭಾರತ ಲೆಜೆಂಡ್ಸ್ ಮತ್ತು ಆಸ್ಟ್ರೇಲಿಯಾ ಲೆಜೆಂಡ್ಸ್ ನಡುವಿನ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ನ ಮೊದಲ ಸೆಮಿಫೈನಲ್ ಇಂದು ಇಲ್ಲಿನ ನವ ರಾಯಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇಂಡಿಯಾ ಲೆಜೆಂಡ್ಸ್ ತಂಡದ ನಾಯಕರಾಗಿದ್ದು, ಅವರ ಅಪ್ಪಟ ಅಭಿಮಾನಿ ಸುಧೀರ್ ಕುಮಾರ್ ಚೌಧರಿ ಕೂಡ ರಾಯ್ಪುರಕ್ಕೆ ಪಂದ್ಯ ವೀಕ್ಷಣೆಗೆ ಆಗಮಿಸಿದ್ದಾರೆ. ಇದೇ ವೇಳೆ ಸುಧೀರ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.
ಈಟಿವಿ ಭಾರತ ಪ್ರತಿನಿಧಿ: 'ನೀವು ಸಚಿನ್ ತೆಂಡೂಲ್ಕರ್ ಅವರ ಅಂತಹ ಕಟ್ಟಾ ಅಭಿಮಾನಿಯಾಗಿದ್ದು ಹೇಗೆ?
ಸುಧೀರ್ ಕುಮಾರ್ ಚೌಧರಿ: ಸಚಿನ್ ಅವರ ದೊಡ್ಡ ಅಭಿಮಾನಿಯಾಗುವ ಪಯಣ 2001 ರಿಂದಲೇ ಪ್ರಾರಂಭವಾಯಿತು. ಜನವರಿ 19, 2001ರಂದು ನಾನು ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಸರಣಿಯ ಮೊದಲ ಪಂದ್ಯವನ್ನು ವೀಕ್ಷಿಸಿದೆ. ಇದೇ ಸರಣಿಯ ನಾಲ್ಕನೇ ಏಕದಿನ ಪಂದ್ಯವನ್ನು ಜನವರಿ 28ರಂದು ಕಾನ್ಪುರದ ಗ್ರೀನ್ಪಾರ್ಕ್ನಲ್ಲಿ ಹಾಗೂ ಮೂರನೇ ಪಂದ್ಯವನ್ನು ವಿಜಯವಾಡದಲ್ಲಿ ನೋಡಿದ್ದೇನೆ. ಹೀಗೆ ನನ್ನ ವಿದ್ಯಾರ್ಥಿ ಜೀವನದಲ್ಲೇ ಕ್ರಿಕೆಟ್ ವೀಕ್ಷಣೆಯತ್ತ ನಾನು ಆಕರ್ಷಿತನಾದೆ.
2002ರಲ್ಲಿ, ಕಾಲೇಜು ಸಂದರ್ಭದಲ್ಲೇ ನಾನು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಲು ಎರಡು ಬಾರಿ ಸೈಕಲ್ನಲ್ಲಿ ಬಿಹಾರದ ಮುಜಾಫರ್ಪುರದಿಂದ ಜೆಮ್ಶೆಡ್ಪುರಕ್ಕೆ ತೆರಳಿದ್ದೆ. ಆದರೆ ಆ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಗಾಯಗೊಂಡಿದ್ದರಿಂದ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ನನ್ನ ಕನಸು ನನಸಾಗದೇ ಉಳಿಯಿತು. ಆಗ ಮುಂಬೈನಲ್ಲಿ ಯಾವುದೇ ಪಂದ್ಯವಿದ್ದರೂ ಸಚಿನ್ ತೆಂಡೂಲ್ಕರ್ ಅವರ ಮನೆಗೆ ಹೋಗಿ ಅವರ ಹಸ್ತಾಕ್ಷರ ತೆಗೆದುಕೊಂಡು, ಪಂದ್ಯವನ್ನೂ ನೋಡುತ್ತೇನೆ ಎಂದು ನಿರ್ಧರಿಸಿದೆ.
ಈಟಿವಿ ಭಾರತ ಪ್ರತಿನಿಧಿ: ನೀವು ಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್ ಅವರನ್ನು ಯಾವಾಗ ಭೇಟಿ ಮಾಡಿದ್ದೀರಿ?
ಸುಧೀರ್ ಕುಮಾರ್ ಚೌಧರಿ:: ನಮ್ಮ ಭೇಟಿಯು ಮುಂಬೈನಲ್ಲಿ ಪ್ರಾರಂಭವಾಯಿತು ಹಾಗೂ ಸಚಿನ್ ಪಂದ್ಯಗಳಿಗೆ ಎಲ್ಲೆಲ್ಲಿ ಪ್ರಯಾಣಿಸಿದರೂ, ನಾನು ಸಹ ಅವರನ್ನು ಹುರಿದುಂಬಿಸಲು ತೆರಳುತ್ತಿದ್ದೇನೆ. ಸಚಿನ್ 9 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರು. ಆದರೆ ನಾನು ಇನ್ನೂ ಭಾರತ ತಂಡವನ್ನು ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ರಸ್ತೆ ಸುರಕ್ಷತಾ ಪಂದ್ಯಾವಳಿ ಮೂಲಕ ಸಚಿನ್ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇದರಿಂದ ಮತ್ತೊಮ್ಮೆ ನನಗೆ ಕ್ರೀಡಾಂಗಣಕ್ಕೆ ತೆರಳಿ ಅವರನ್ನು ಬೆಂಬಲಿಸುವ ಅವಕಾಶ ಸಿಕ್ಕಿದೆ.
ಈಟಿವಿ ಭಾರತ ಪ್ರತಿನಿಧಿ: ಸಚಿನ್ ತೆಂಡೂಲ್ಕರ್ ಬಗ್ಗೆ ಕ್ರೇಜ್ ಯಾವಾಗ ಪ್ರಾರಂಭವಾಯಿತು?
ಸುಧೀರ್ ಕುಮಾರ್ ಚೌಧರಿ: ಕಾಲೇಜು ದಿನಗಳಲ್ಲಿ ಪತ್ರಕರ್ತರೊಬ್ಬರು ಸಚಿನ್ ಬಗ್ಗೆ ನನ್ನಲ್ಲಿ ಕುತೂಹಲ ಕೆರಳಿಸಿದ್ದರು. ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗುವಂತೆ ಸಲಹೆ ನೀಡಿದರು. ನಂತರ ನಾನು ಮುಂಬೈನಲ್ಲಿ ಸಚಿನ್ರನ್ನು ಭೇಟಿಯಾದೆ ಮತ್ತು ಅಂದಿನಿಂದ ನನಗೆ ಸಚಿನ್ ಅಂದರೆ ಬಹಳ ಕ್ರೇಜ್.
ಈಟಿವಿ ಭಾರತ ಪ್ರತಿನಿಧಿ:: ನೀವು ಎಲ್ಲಿಗೆ ಹೋಗಿ ಭಾರತ ತಂಡದ ಪಂದ್ಯವನ್ನು ವೀಕ್ಷಿಸಿದ್ದೀರಿ?
ಸುಧೀರ್ ಕುಮಾರ್ ಚೌಧರಿ: ನಾನು ಭಾರತದಲ್ಲಿ ಮಾತ್ರವಲ್ಲದೇ ಪಾಕಿಸ್ತಾನದ ಲಾಹೋರ್ನಲ್ಲಿಯೂ ಪಂದ್ಯಗಳನ್ನು ಆನಂದಿಸಿದ್ದೇನೆ. ಇದಲ್ಲದೇ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ಗೆ ಹೋಗಿ ತಂಡ ಹಾಗೂ ವಿಶೇಷವಾಗಿ ಸಚಿನ್ಗೆ ಬೆಂಬಲಿಸಿದ್ದೇನೆ.