ಲಾಕ್ಡೌನ್ ಸಡಿಲಿಕೆ ನಂತರ ಮತ್ತೆ ಧಾರಾವಾಹಿ ಶೂಟಿಂಗ್ ಆರಂಭವಾಗಿದ್ದು ಕಳೆದ ವಾರದಿಂದ ಹೊಸ ಸಂಚಿಕೆಗಳು ಪ್ರಸಾರ ಆರಂಭಿಸಿದೆ. ಸುಮಾರು 2 ತಿಂಗಳಿಂದ ಸ್ತಬ್ಧವಾಗಿದ್ದ ಕಿರುತೆರೆ ಇದೀಗ ಮತ್ತೆ ಧಾರಾವಾಹಿಗಳ ಪ್ರಸಾರದಿಂದ ಕಂಗೊಳಿಸುತ್ತಿದೆ. ಮಾತ್ರವಲ್ಲ ಧಾರಾವಾಹಿಗಳ ನಡುವೆ ಪೈಪೋಟಿ ಕೂಡಾ ಆರಂಭವಾಗಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿ ಸದ್ಯಕ್ಕೆ ಮೊದಲ ಸ್ಥಾನದಲ್ಲಿದೆ. ವೇದಾಂತ್ ಅಮೂಲ್ಯ ಮುದ್ದಾದ ಪ್ರೀತಿಗೆ, ಪ್ರೇಮ ಸಲ್ಲಾಪಕ್ಕೆ ವೀಕ್ಷಕರು ಸೋತಿದ್ದಾರೆ. ವೇದಾಂತ್ ತಾಯಿ ಸುಹಾಸಿನಿ ವೇದಾಂತ್ ಮತ್ತು ಅಮೂಲ್ಯಳನ್ನು ದೂರ ಮಾಡಲು ಸಾಹಿತ್ಯ ಜೊತೆ ವೇದಾಂತ್ ನಿಶ್ಚಿತಾರ್ಥ ಮಾಡುತ್ತಾಳೆ. ವೇದಾಂತ್ ಸಾಹಿತ್ಯಳನ್ನು ಮದುವೆಯಾಗುತ್ತಾನಾ ಅಥವಾ ಈಗಲಾದರೂ ಅಮೂಲ್ಯಳಿಗೆ ತನ್ನ ಪ್ರೀತಿಯನ್ನು ಹೇಳುತ್ತಾನಾ ಎಂಬುದನ್ನು ಇನ್ನಷ್ಟೇ ಗೊತ್ತಾಗಬೇಕಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆಜೊತೆಯಲಿ' ಧಾರಾವಾಹಿ ಈ ವಾರ ಎರಡನೇ ಸ್ಥಾನ ಪಡೆದಿದೆ. ನಾಯಕ ಆರ್ಯವರ್ಧನ್ ನಾಯಕಿ ಅನು ಬಳಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ ಎಂಬುದು ಹಲವರು ಕಾತರದಿಂದ ಇದ್ದರು. ಆದರೆ ಅದು ಇನ್ನೂ ಸಾಧ್ಯವಾಗಿಲ್ಲ. ಇತ್ತ ಆರ್ಯವರ್ಧನ್ ಮನೆಯಲ್ಲಿ ಸಣ್ಣ ಪುಟ್ಟ ರಗಳೆಗಳು. ಮೀರಾ ಹೆಗಡೆ ಅನುಳನ್ನು ಅಪರಾಧಿ ಮಾಡಲು ಸಂಚು ಮಾಡುವುದು, ಇದರಿಂದ ಆರ್ಯವರ್ಧನ್ ಅನುಳನ್ನು ಪಾರು ಮಾಡುವುದು, ಮೀರಾ ಮಾಡಿದ ತಪ್ಪಿಗೆ ಶಿಕ್ಷೆ ಆಗುವುದಾ ಹೇಗೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ 'ನಾಗಿಣಿ 2' ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ತನ್ನ ಪ್ರಿಯತಮನನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮತ್ತು ನಾಗಲೋಕದಿಂದ ದುಷ್ಟರು ಎತ್ತಿಕೊಂಡು ಹೋದ ನಾಗಮಣಿಯನ್ನು ಮರಳಿ ಪಡೆಯಲು ನಾಗಿಣಿ ಮಾನವ ರೂಪದಲ್ಲಿ ಭೂಲೋಕಕ್ಕೆ ಬರುತ್ತಾಳೆ. ಅಲ್ಲದೆ ತನ್ನ ಆದಿಶೇಷ ಯಾರು ಎಂಬ ಗೊಂದಲದಲ್ಲಿ ಇರುತ್ತಾಳೆ. ಮುಂದೆ ಏನಾಗುವುದು ಎಂದು ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಕಥೆ ಹಾಗೂ ಗ್ರಾಫಿಕ್ಸ್ ಮೂಲಕ 'ನಾಗಿಣಿ 2' ವೀಕ್ಷಕರನ್ನು ರಂಜಿಸಲು ಯಶಸ್ವಿಯಾಗಿದೆ.

ಜೀ ಕನ್ನಡ ವಾಹಿನಿಯ 'ಪಾರು' ಧಾರಾವಾಹಿ ಟಾಪ್ 4 ನೇ ಸ್ಥಾನದಲ್ಲಿದೆ. ಅರಸನ ಕೋಟೆ ಅಖಿಲಾಂಡೇಶ್ವರಿ ಮಗ ಪ್ರೀತಮ್ ರಣಕಲ್ ವೀರಯ್ಯನ ಮಗಳು ಜನನಿಯನ್ನು ಮದುವೆ ಆಗಿದ್ದಾಗಿದೆ. ಮೊದಲ ಮಗ ಆದಿತ್ಯ ತನಗೆ ಅರಿವಿಲ್ಲದಂತೆ ಪಾರುಳನ್ನು ಪ್ರೀತಿ ಮಾಡುತ್ತಾನೆ. ಆದರೆ ಅಖಿಲಾಂಡೇಶ್ವರಿ ಎಂದಿಗೂ ಪಾರುಳನ್ನು ಮನೆ ಸೊಸೆ ಮಾಡಿಕೊಳ್ಳಲು ತಯಾರಿ ಇರುವುದಿಲ್ಲ. ಇದರ ಜೊತೆಗೆ ಅನುಷ್ಕಾ ಆದಿತ್ಯಳನ್ನು ಮದುವೆಯಾಗಬೇಕು, ಅವನು ತನ್ನವನಾಗಬೇಕು ಎಂಬ ಉದ್ದೇಶದಿಂದ ಅವನನ್ನು ಪಡೆಯಲು ಹರಸಾಹಸ ಪಡುತ್ತಾಳೆ. ಪಾರು ಆದಿತ್ಯ ಒಂದಾಗುತ್ತಾರಾ, ಅಖಿಲಾಂಡೇಶ್ವರಿ ಇವರ ಪ್ರೀತಿಯನ್ನು ಸಮ್ಮತಿಸುತ್ತಳಾ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಜೀ ಕನ್ನಡ ವಾಹಿನಿಯ 'ಯಾರೇ ನೀ ಮೋಹಿನಿ' ಧಾರಾವಾಹಿ ಟಾಪ್ 5 ಸ್ಥಾನದಲ್ಲಿದೆ. ನಾಯಕ ಮುತ್ತು ಹಾಗೂ ನಾಯಕಿ ಬೆಳ್ಳಿಯ ಮದುವೆ ಈಗಷ್ಟೇ ಆಗಿದೆ. ಮುತ್ತುವಿನ ಸಮಸ್ತ ಆಸ್ತಿ ತನ್ನದಾಗಬೇಕು ಎಂದು ಚಿಕ್ಕಮ್ಮ ಮುತ್ತುವಿನ ಜೊತೆಗೆ ತಮ್ಮನ ಮಗಳು ಮಾಯಾ ಮದುವೆ ಮಾಡುವ ತಯಾರಿಯಲ್ಲಿ ಇರುತ್ತಾಳೆ. ಆದರೆ ಕೊನೆ ಕ್ಷಣದಲ್ಲಿ ಮುತ್ತು ಮೊದಲ ಹೆಂಡತಿ ಚಿತ್ರಾ ಆತ್ಮ ಚಿಕ್ಕಮ್ಮನ ದೇಹದಲ್ಲಿ ಸೇರುವ ಮೂಲಕ ಮುತ್ತು ಹಾಗೂ ಬೆಳ್ಳಿ ಮದುವೆ ಮಾಡಿಸುತ್ತಾಳೆ. ಇದಕ್ಕೆ ಕೋಪಗೊಂಡ ಮಾಯಾ, ಬೆಳ್ಳಿ ಸಂಸಾರ ಸರಾಗವಾಗಿ ಸಾಗಲು ನಾನು ಬಿಡಲಾರೆ ಎಂದು ಚಾಲೆಂಜ್ ಮಾಡಿ ಅಲ್ಲಿಂದ ಹೊರಡುತ್ತಾಳೆ.

ಒಟ್ಟಿನಲ್ಲಿ ಈ ಐದೂ ಧಾರಾವಾಹಿಗಳು ವೀಕ್ಷಕರನ್ನು ಕುರ್ಚಿಯ ತುದಿಗೆ ತಂದು ಕೂರಿಸಿರುವುದರಲ್ಲಿ ನೋ ಡೌಟ್. ಮುಂದಿನ ದಿನಗಳಲ್ಲಿ ಈ ಧಾರಾವಾಹಿ ಕಥೆಗಳಲ್ಲಿ ಹೇಗೆ ತಿರುವು ಬರಲಿದೆ ಕಾದು ನೋಡಬೇಕು.