ಕನ್ನಡ ಕಿರುತೆರೆಗೆ ಕೂಡಾ ಇದೀಗ ಡಬ್ಬಿಂಗ್ ಧಾರಾವಾಹಿಗಳು ಕಾಲಿಟ್ಟಿದ್ದು ಕಳೆದ ಒಂದು ತಿಂಗಳಿಂದ ಎಲ್ಲಾ ಮನರಂಜನಾ ವಾಹಿನಿಗಳಲ್ಲಿ ಹೊಸ ಹೊಸ ಡಬ್ಬಿಂಗ್ ಧಾರಾವಾಹಿಗಳು ಪ್ರಸಾರವಾಗುತ್ತಿವೆ.
ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಡಬ್ಬಿಂಗ್ ಧಾರಾವಾಹಿಗಳಲ್ಲಿ 'ಮಹಾಭಾರತ' ಕೂಡಾ ಒಂದು. ಈ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಜನಸಾಮಾನ್ಯರು ಮಾತ್ರವಲ್ಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡಾ 'ಮಹಾಭಾರತ' ಧಾರಾವಾಹಿಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಹಿಂದಿಯಿಂದ ಕನ್ನಡಕ್ಕೆ ಡಬ್ ಆದ ಈ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7 ರಿಂದ 8.30 ವರೆಗೆ ಒಂದೂವರೆ ಗಂಟೆಗಳ ಕಾಲ ಪ್ರಸಾರವಾಗುತ್ತಿದೆ.

ಈ ಧಾರಾವಾಹಿಯ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ಜನರಿಗೆ ಜೀವನದಲ್ಲಿ ಮೌಲ್ಯಗಳು ತುಂಬಾ ಮುಖ್ಯ. ಆ ಮೌಲ್ಯಗಳನ್ನು 'ಮಹಾಭಾರತ' ಧಾರಾವಾಹಿ ಜನರಿಗೆ ಹೇಳಿಕೊಡುತ್ತಿದೆ. ಧಾರಾವಾಹಿ ಆರಂಭವಾದಾಗಿನಿಂದ ತಪ್ಪದೇ ನೋಡುತ್ತಿದ್ದು ನಾನೂ ಕೂಡಾ ಈ ಧಾರಾವಾಹಿಯ ಅಭಿಮಾನಿಯಾಗಿದ್ದೇನೆ. ಅದರಲ್ಲೂ ನನಗೆ ಶ್ರೀಕೃಷ್ಣನ ಪಾತ್ರ ಎಂದರೆ ಬಹಳ ಇಷ್ಟ. ಶ್ರೀಕೃಷ್ಣನ ಮಾತುಗಳು, ಶ್ರೀಕೃಷ್ಣನ ಬೋಧನೆಗಳು ನಮ್ಮೆಲ್ಲರ ಜೀವನಕ್ಕೆ ಸಂಬಂಧಿಸಿದ್ದಾಗಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.