ಬಿಗ್ಬಾಸ್ ಸೀಸನ್ 7 ರ ಸ್ಪರ್ಧಿಯಾಗಿದ್ದ ಚಂದನ ಅನಂತಕೃಷ್ಣ 11 ನೇ ವಾರದಲ್ಲಿ ತಮ್ಮ ದೊಡ್ಮನೆ ಜರ್ನಿ ಮುಗಿಸಿ ಹೊರಬಂದಿದ್ದಾರೆ. ಚಂದನ ಯಾರು ಎಂಬುದು ಎಲ್ಲರಿಗೂ ತಿಳಿದಿರಲಿಲ್ಲ. ಆದರೆ ಯಾವಾಗ ಚಂದನ ಬಿಗ್ಬಾಸ್ಗೆ ಹೋಗಿಬಂದರೋ ಅವರ ಅದೃಷ್ಟದ ಬಾಗಿಲು ತೆರೆಯಿತು.
![Chandana Ananthakrishna](https://etvbharatimages.akamaized.net/etvbharat/prod-images/kn-bng-01-chandana-anchoring-experience-photo-ka10018_21012020103700_2101f_1579583220_41.jpg)
ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಸ ಕಾರ್ಯಕ್ರಮ 'ಹಾಡು ಕರ್ನಾಟಕ' ನಿರೂಪಕಿಯಾಗಿ ಚಂದನ ಆಯ್ಕೆಯಾಗಿದ್ದಾರೆ. 'ಪುಟ್ಮಲ್ಲಿ ', 'ರಾಜ ರಾಣಿ ' ಧಾರಾವಾಹಿ ಮೂಲಕ ಕಿರಿತೆರೆಯಲ್ಲಿ ಮಿಂಚಿರುವ ಮುದ್ದು ಗೊಂಬೆ ಚಂದನಾಗೆ ನಿರೂಪಣೆ ಕ್ಷೇತ್ರ ಹೊಸದು. ಇದೇ ಮೊದಲ ಬಾರಿ ಅವರು ನಿರೂಪಣೆಗೆ ಬಂದಿದ್ದಾರೆ. ಮೊದಲ ಬಾರಿ ನಿರೂಪಣೆ ಮಾಡಿದಾಗ ಚಂದನ ಸ್ವಲ್ಪ ನರ್ವಸ್ ಆಗಿದ್ದರಂತೆ. ಆದರೆ ನಂತರ ಸರಿ ಆಯಿತು ಎನ್ನುವ ಚಂದನ ಈಗಾಗಲೇ ಪ್ರೋಮೋ ಶೂಟಿಂಗ್ನಲ್ಲಿ ಭಾಗವಹಿಸಿದ್ದಾರೆ. ಅವರ ಮುದ್ದಾದ ನಿರೂಪಣೆಗೆ ವಾಹಿನಿಯಿಂದಲೂ ಕೂಡಾ ಗ್ರೀನ್ ಸಿಗ್ನಲ್ ಸಿಕ್ಕಿದೆ.
![Chandana Ananthakrishna](https://etvbharatimages.akamaized.net/etvbharat/prod-images/kn-bng-01-chandana-anchoring-experience-photo-ka10018_21012020103700_2101f_1579583220_20.jpg)
ಹಾಡು ಕರ್ನಾಟಕದ ನಿರೂಪಕಿಯಾಗಿ ವೀಕ್ಷಕರ ಮುಂದೆ ಬರಲಿರುವ ಚಂದನ ಅದಕ್ಕೆಂದೇ ಸಾಕಷ್ಟು ವರ್ಕೌಟ್ ಕೂಡಾ ಮಾಡುತ್ತಿದ್ದಾರೆ. ಭಾಷೆಯ ಮೇಲಿನ ಹಿಡಿತಕ್ಕೆ ಕನ್ನಡ ಪತ್ರಿಕೆಯನ್ನು ಪ್ರತಿದಿನ ತಪ್ಪದೆ ಓದುತ್ತಿದ್ದಾರಂತೆ. ಕನ್ನಡಿ ಮುಂದೆ ನಿಂತು ನಿರೂಪಣೆ ಮಾಡುವುದದನ್ನು ಕೂಡಾ ಕಲಿಯುತ್ತಿದ್ದಾರೆ. ಜೊತೆಗೆ ಬೇರೆ ನಿರೂಪಕರು ಹೇಗೆ ನಿರೂಪಣೆ ಮಾಡುತ್ತಾರೆ ಎಂದು ಕೂಡಾ ಚಂದನ ಗಮನಿಸುತ್ತಿದ್ದಾರಂತೆ. ಅರಳು ಹುರಿದಂತೆ ಮಾತನಾಡುವ ಅಕುಲ್ ಬಾಲಾಜಿ ಚಂದನ ಅವರಿಗೆ ಫೇವರೆಟ್ ಆ್ಯಂಕರ್ ಎಂದು ಅವರೇ ಹೇಳಿಕೊಂಡಿದ್ದಾರೆ.