ಸಂಗೀತ ಪ್ರಿಯರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಿಮ್ಮೆಲ್ಲರ ನೆಚ್ಚಿನ 'ಹಾಡು ಕರ್ನಾಟಕ' ರಿಯಾಲಿಟಿ ಶೋ ಇದೀಗ ಹೊಸ ಸಂಚಿಕೆಗಳೊಂದಿಗೆ ಮತ್ತೆ ಮೂಡಿ ಬರಲಿದೆ.
ಹೌದು, ಲಾಕ್ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ 'ಹಾಡು ಕರ್ನಾಟಕ' ಶೋ ಮತ್ತೊಮ್ಮೆ ಮನರಂಜನೆ ನೀಡಲು ಬರುತ್ತಿದೆ. ಈ ಮೂಲಕ ಸಂಗೀತಪ್ರಿಯರಿಗೆ ಮಗದೊಮ್ಮೆ ಗಾನಸುಧೆಯನ್ನು ಕೇಳುವ ಸುವರ್ಣವಕಾಶ ದೊರೆಯಲಿದೆ.
ಹಾಡುವ ಪ್ರತಿಭೆಗಳನ್ನು ಗುರುತಿಸಿ, ಉತ್ತಮ ವೇದಿಕೆ ಕಲ್ಪಿಸಿಕೊಟ್ಟು ಅವರೊಳಗಿನ ಅದ್ಭುತ ಪ್ರತಿಭೆಯನ್ನು ಎಲ್ಲೆಡೆ ಪಸರಿಸಲು ಈಗಾಗಲೇ ಹಲವು ಬಗೆಯ ಶೋಗಳು ಬಂದಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದಿದೆ. ಈ ಸಾಲಿಗೆ 'ಹಾಡು ಕರ್ನಾಟಕ'ವೂ ಸೇರಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಈ ಕಾರ್ಯಕ್ರಮ, ಲಾಕ್ಡೌನ್ ನಂತರ ಮತ್ತೆ ಪ್ರಸಾರವಾಗುತ್ತಿರುವುದು ವೀಕ್ಷಕರಿಗೆ ಸಂತಸ ತಂದಿದೆ.
'ರಾಜ-ರಾಣಿ' ಧಾರಾವಾಹಿಯಲ್ಲಿ ಚುಕ್ಕಿಯಾಗಿ ನಟಿಸಿದ ಚಂದನಾ ಹಾಡು ಕರ್ನಾಟಕದ ಮೂಲಕ ಮೊದಲ ಬಾರಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಮೊದಲ ಪ್ರಯತ್ನದಲ್ಲೇ ವೀಕ್ಷಕರ ಮನಗೆದ್ದಿದ್ದರು. ಚಂದನಾ ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ , ರಘು ದೀಕ್ಷಿತ್, ಸಾಧುಕೋಕಿಲ, ವಾರಿಜಾಶ್ರೀ, ಇಂದು ನಾಗರಾಜ್ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಮೊದಲು ಕಲರ್ಸ್ ಸೂಪರ್ ನಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ ಇದೀಗ ಯಾವಾಗ ಮತ್ತು ಯಾವ ಸಮಯದಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿ ಹೊರಬೀಳಬೇಕಿದೆಯಷ್ಟೇ.