ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲಾ ಅಗಲಿ ಐದು ತಿಂಗಳು ತುಂಬುತ್ತಿದೆ. ಆದರೆ ಅಂಬರೀಶ್ ನಿಧನದ ನಂತರ ಚಿತ್ರರಂಗ ಅಲ್ಲದೆ , ರಾಜ್ಯ ರಾಜಕಾರಣದ ಸಂಪೂರ್ಣ ಚಿತ್ರಣ ಕೂಡಾ ಬದಲಾಗಿದೆ. ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣಾ ಸ್ವತಂತ್ರ ಅಭ್ಯರ್ಥಿಯಾಗಿ ಅಂಬರೀಶ್ ಪತ್ನಿ ಸುಮಲತಾ ರಾಜಕೀಯ ಎಂಟ್ರಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಆದರೆ, ಅಂಬರೀಶ್ ಇಲ್ಲದ ಸಮಯದಲ್ಲಿ ಸುಮಲತಾ ಪರವಾಗಿ ದರ್ಶನ್ ಹಾಗೂ ಯಶ್ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಅಂಬರೀಶ್ ಜೊತೆಗೆ ಸ್ಯಾಂಡಲ್ವುಡ್ನ ಸಾಕಷ್ಟು ಮಂದಿಗೆ ಉತ್ತಮ ಬಾಂಧವ್ಯ ಇತ್ತು. ದರ್ಶನ್ ಅಂಬಿ ಅವರನ್ನು ಅಪ್ಪಾಜಿ ಎಂದೇ ಕರೆಯುತ್ತಿದ್ದರು. ಇನ್ನು ಯಶ್ ಹಾಗೂ ರಾಧಿಕಾ ದಂಪತಿಗೆ ಕೂಡಾ ಅಂಬರೀಶ್ ಎಂದರೆ ಎಲ್ಲಿಲ್ಲದ ಗೌರವ. ರಾಧಿಕಾ ಪಂಡಿತ್ ಗರ್ಭಿಣಿಯಾಗಿದ್ದಾಗ ಅಂಬರೀಶ್ ಯಶ್ ಮಗುವಿಗೆಂದೇ ವಿಶೇಷವಾಗಿ ತೊಟ್ಟಿಲೊಂದನ್ನು ಗಿಫ್ಟ್ ಮಾಡಿದ್ದರು.
ಇನ್ನು ಯಶ್, ರಾಧಿಕಾ ಮದುವೆಯಂದು ಅಂಬರೀಶ್ ಮಾತನಾಡಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಅವರ ನಡುವೆ ಎಂತಹ ಬಾಂಧವ್ಯ ಇತ್ತು ಎಂಬುದು ತಿಳಿಯುತ್ತದೆ. 'ಯಾರೂ ಕೂಡಾ ದೇವರಿಗೆ ಅಪ್ಲಿಕೇಶನ್ ಹಾಕಿ ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಕೇಳಿಕೊಂಡು ಬರುವುದಿಲ್ಲ. ಗೌಡನಾಗಿ ಹುಟ್ಟಿದ್ದೀನಿ ಅಷ್ಟೇ, ಆದರೆ ಒಂದು ಗ್ರಾಮೀಣ ಪ್ರದೇಶದಿಂದ ಬಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ಯಶ್ ನಮ್ಮನ್ನೆಲ್ಲಾ ಅವರ ಮದುವೆ ಸಮಾರಂಭಕ್ಕೆ ಕರೆದಿರುವುದು ಗ್ರೇಟ್ ' ಎಂದು ಯಶ್ ಅವರ ಗುಣಗಾನ ಮಾಡಿದ್ದಾರೆ ಅಂಬಿ.
ವಿಡಿಯೋ ನೋಡಿದ ಅಭಿಮಾನಿಗಳು ಅಂಬಿ ಇನ್ನೂ ನಮ್ಮೊಂದಿಗೆ ಇರಬಾರದಿತ್ತಾ ಎಂದು ಬೇಸರ ಮಾಡಿಕೊಳ್ಳುತ್ತಿರುವುದಂತೂ ನಿಜ.