ಸ್ವತಂತ್ಯ್ರ ಹೋರಾಟಗಾರ ಉಯ್ಯಾಲವಾಡ ನರಸಿಂಹರೆಡ್ಡಿ ಜೀವನಚರಿತ್ರೆ ಕಥೆ ಹೊಂದಿರುವ ’ಸೈ ರಾ ನರಸಿಂಹರೆಡ್ಡಿ’ ಸಿನಿಮಾ ಶೂಟಿಂಗ್ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಸುರೇಂದರ್ ರೆಡ್ಡಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

ಇನ್ನು ಚಿರಂಜೀವಿ ಕೂಡಾ ಇತ್ತೀಚೆಗೆ ಚೀನಾ, ಜಪಾನ್ ಪ್ರವಾಸ ಮುಗಿಸಿ ಹೈದರಾಬಾದ್ಗೆ ವಾಪಸಾಗಿದ್ದಾರೆ. ಆದಷ್ಟು ಬೇಗ ಶೂಟಿಂಗ್ ಮುಗಿಸಲು ಚಿತ್ರತಂಡ ಶ್ರಮಪಟ್ಟು ಕೆಲಸ ಮಾಡುತ್ತಿದ್ದು ಸಿನಿಮಾವನ್ನು ಈ ವರ್ಷದ ದಸರಾ ವೇಳೆಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿರು ಜೊತೆಗೆ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಇವರೊಂದಿಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ವಿಜಯ್ ಸೇತುಪತಿ, ತಮನ್ನ ಭಾಟಿಯಾ, ಸುದೀಪ್, ಜಗಪತಿ ಬಾಬು ಹಾಗೂ ಇನ್ನಿತರರು ಸಿನಿಮಾದ ತಾರಾಗಣದಲ್ಲಿದ್ದಾರೆ.

ಇತ್ತೀಚಿನ ವರದಿ ಪ್ರಕಾರ ಚಿತ್ರಕ್ಕೆ ಧ್ವನಿ ನೀಡಲು ಅನುಷ್ಕಾ ಶೆಟ್ಟಿ ಅವರನ್ನು ಕೇಳಲಾಗಿದೆಯಂತೆ. ಒಂದು ವೇಳೆ ಸ್ವೀಟಿ ಚಿತ್ರಕ್ಕೆ ಧ್ವನಿ ನೀಡಲು ಒಪ್ಪಿದ್ದಲ್ಲಿ ಆಕೆಯ ಧ್ವನಿಯಿರುವ ಟೀಸರ್ ಶೀಘ್ರದಲ್ಲೇ ಹೊರಬರಲಿದೆ. ಚಿತ್ರವನ್ನು ಕೊನಿಡೇಲ ಪ್ರೊಡಕ್ಷನ್ ಬ್ಯಾನರ್ ಅಡಿ ರಾಮ್ ಚರಣ್ ತೇಜ ನಿರ್ಮಿಸುತ್ತಿದ್ದಾರೆ.