ಲಾಕ್ಡೌನ್ ಕಾರಣದಿಂದ 3 ತಿಂಗಳು ಸ್ಥಗಿತಗೊಂಡಿದ್ದ ಸರಿಗಮಪ ಸಂಗೀತ ಕಾರ್ಯಕ್ರಮ ಇದೇ ಭಾನುವಾರದಿಂದ ಮತ್ತೆ ಪ್ರಾರಂಭವಾಗುತ್ತಿದೆ.
ಸರಿಗಮಪ ಕಾರ್ಯಕ್ರಮದ ಮಹಾಗುರುಗಳಾದ ನಾದಬ್ರಹ್ಮ ಡಾ.ಹಂಸಲೇಖ ಅವರು ಸರಿಗಮಪದ ರಾಗದ ಬೀಗ ತೆಗೆಯುವುದರ ಮೂಲಕ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿದರು. ಅವರೊಂದಿಗೆ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಾಗೂ ನಿರೂಪಕಿ ಅನುಶ್ರೀ ಉಪಸ್ಥಿತರಿದ್ದರು.
ಕನ್ನಡ ಕಿರುತೆರೆಯ ಮಹತ್ತರ ಸಂಗೀತ ಕಾರ್ಯಕ್ರಮ ಸರಿಗಮಪ-16 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿ, 17ನೇ ಆವೃತ್ತಿ ನಡೆಯುತ್ತಿತ್ತು. ಆದರೆ, ಕೊರೊನಾ ಲಾಕ್ಡೌನ್ನಿಂದಾಗಿ ಈ ಕಾರ್ಯಕ್ರಮ 3 ತಿಂಗಳ ಕಾಲ ಸ್ಥಗಿತಗೊಂಡಿದೆ. ಇದೇ ಭಾನುವಾರ ಸಂಜೆ 7.30ಕ್ಕೆ ಪ್ರಸಾರವಾಗಲಿರುವ ಈ ಕಾರ್ಯಕ್ರಮ ವೀಕ್ಷಕರನ್ನು ಮತ್ತೆ ಸಂಗೀತ ಲೋಕಕ್ಕೆ ಕರೆದೊಯ್ಯಲಿದೆ.
ಸರಿಗಮಪ ಲಾಕ್ಡೌನ್ ಸಮಸ್ಯೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ ಅದರ ಜನಪ್ರಿಯತೆ ಕುಗ್ಗಿಲ್ಲ. ಜನರು ಮನೆಯಲ್ಲಿಯೇ ಇದ್ದು ಆರೋಗ್ಯಕರವಾಗಿರಬೇಕಾದ ಈ ಸಂದರ್ಭದಲ್ಲಿ ಅವರ ಅಚ್ಚುಮೆಚ್ಚಿನ ಕಾರ್ಯಕ್ರಮ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ಹಿನ್ನೆಲೆ ಸರಿಗಮಪ ಮತ್ತೆ ಪ್ರಾರಂಭಿಸಿದ್ದೇವೆ. ಎಂದಿನಂತೆ ವೀಕ್ಷಕರು ಈ ಕಾರ್ಯಕ್ರಮವನ್ನು ಸ್ವಾಗತಿಸುತ್ತಾರೆ ಎಂಬ ವಿಶ್ವಾಸ ನಮ್ಮದು ಎಂದು ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಹೇಳಿದ್ದಾರೆ.