ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ನಟಿ ಸಂಯುಕ್ತ ಹೊರನಾಡು, ಲೈಫ್ ಇಷ್ಟೆನೇ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಗುರುತು ಕ್ರಿಯೇಟ್ ಮಾಡಿಕೊಂಡಿದ್ದಾರೆ.
ಸಂಯುಕ್ತ ಹೊರನಾಡು ಸಿನಿಮಾಗಿಂತಲೂ ಹೆಚ್ಚಾಗಿ ಸಮಾಜಮುಖಿ ಕೆಲಸಗಳಿಂದ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬೀದಿ ಶ್ವಾನಗಳ ಹೊಟ್ಟೆ ತುಂಬಿಸಿದ ಸಂಯುಕ್ತ ಹೊರನಾಡು, ಇದೀಗ ವೀಕ್ ಎಂಡ್ ಹೆಸರಲ್ಲಿ ಮತ್ತೊಂದು ಸಮಾಜಮುಖಿ ಕೆಲಸಕ್ಕೆ ಕೈ ಹಾಕಿದ್ದಾರೆ.

ಜಯನಗರದ ಬಸ್ ಸ್ಟಾಪ್ ಎದುರು ಪಾದಚಾರಿಗಳಿಗೆ ಅಡ್ಡಿಯಾಗುತ್ತಿದ್ದ ಜಲ್ಲಿ, ಮಣ್ಣನ್ನು ಶುಚಿಗೊಳಿಸಿ ದಾರಿಹೋಕರಿಗೆ ಅನುವು ಮಾಡಿಕೊಟ್ಟಿದ್ದಾರೆ. ಇವರ ಜೊತೆ ನಟ ಪ್ರಕಾಶ್ ಬೆಳವಾಡಿ ಹಾಗೂ ಮತ್ತೊಬ್ಬ ಸಮಾಜಮುಖಿ ಕೆಲಸಗಾರ ನಾಗೇಶ್ ಸಿದ್ದಾಂತಿ ಸಹಯೋಗದಲ್ಲಿ ಈ ಕಾರ್ಯವನ್ನು ಮಾಡುತ್ತಿದ್ದಾರೆ.

ಒಂದು ಗಂಟೆಗಳ ಕಾಲ ಕಲ್ಲು ಮಣ್ಣಿನಿಂದ ಕೂಡಿರುವ ಜಾಗವನ್ನ ಸ್ವಚ್ಛ ಮಾಡಿ ಜನರಿಗೆ ಓಡಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಕೆಲಸದ ಬಗ್ಗೆ ಮಾತನಾಡಿದ ಸಂಯುಕ್ತ ಹೊರನಾಡು, ವೀಕ್ ಎಂಡ್ ಹೆಸರಲ್ಲಿ ವಾರದಲ್ಲಿ ಒಂದು ದಿನ ಈ ರೀತಿಯ ಕೆಲಸಗಳನ್ನ ಮಾಡಲು ತೀರ್ಮಾನಿಸಿದ್ದಾರಂತೆ.

ಸಂಯುಕ್ತ ಹೊರನಾಡು ಈ ಸಮಾಜಮುಖಿ ಕೆಲಸದಿಂದ ಪ್ರೇರಣೆಗೊಂಡಿರುವ ಐಟಿಬಿಟಿ ಉದ್ಯೋಗಿಗಳು ಈ ರೀತಿ ಕೆಲಸ ಮಾಡಲು ಆಸಕ್ತಿ ತೋರಿಸಿದ್ದಾರಂತೆ.ಬೆಂಗಳೂರಿನಲ್ಲಿ ಈ ರೀತಿಯ ಸಮಸ್ಯೆಗಳ ಬಗ್ಗೆ ನಮಗೆ ಹೇಳಿದ್ರೆ ತಂಡದೊಂದಿಗೆ ಬಂದು ಸ್ವಚ್ಛ ಮಾಡುವುದಾಗಿ ಸಂಯುಕ್ತ ಹೊರನಾಡು ಹೇಳಿದ್ದಾರೆ.